ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ದೆಹಲಿ: ಜಗತ್ತು ಕೊರೊನಾ ಮಹಾಮಾರಿಯ ಕರಾಳ ದಿನಗಳಿಂದ ಈಗ ತಾನೇ ಹೊರ ಬಂದಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಭೀಕರ ಸೂಕ್ಷ್ಮಾಣು ಜೀವಿ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ ವೈರಸ್’ (Ebola Virus) ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು (PHEIC) ಘೋಷಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಸಹ ಮುನ್ನೆಚ್ಚರಿಕೆ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಲಸಿಕೆ ಇಲ್ಲದ ಅಪರೂಪದ ತಳಿ; ಕೋವಿಡ್ನಂತೆ ಹರಡುವುದಿಲ್ಲ:
ಡಾ. ದಿವ್ಯಾ ಅವರ ಪ್ರಕಾರ, ಪ್ರಸ್ತುತ ಔಟ್ಬ್ರೇಕ್ ಆಗಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಆದರೆ, ಇದು ಕೋವಿಡ್ ಮಹಾಮಾರಿಯಂತೆ ಗಾಳಿಯಲ್ಲಿ ಅತಿ ವೇಗವಾಗಿ ಪೆಂಡಾಮಿಕ್ ಆಗುವ ಸಾಧ್ಯತೆ ತೀರಾ ಕಡಿಮೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕ ಅಗತ್ಯವಾಗುತ್ತದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಠಿಣ ನಿಗಾ ಅಗತ್ಯ:
ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ, ರಿಸ್ಕ್ ಹೆಚ್ಚಿರುವ ಕಾಂಗೋ, ಉಗಾಂಡ ಮತ್ತು ಇತರೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಸ್ಕ್ರೀನಿಂಗ್ ನಡೆಸುವ ಜೊತೆಗೆ, ಅಗತ್ಯವಿದ್ದರೆ ಆಫ್ರಿಕಾ ಪ್ರವಾಸಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ ಎಂದು ಡಾ. ದಿವ್ಯಾ ತಿಳಿಸಿದ್ದಾರೆ. ಸಾರ್ವಜನಿಕರು ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಸದ್ಯಕ್ಕೆ ಎಚ್ಚರಿಕೆ ವಹಿಸುವುದು ಉತ್ತಮ.



