Updated By: Priyalachhi
ಬೆಂಗಳೂರು: ಚುಟುಕು ಭಾಷಣಕ್ಕೆ ಸೀಮಿತಗೊಳಿಸಿ ಜಂಟಿ ಅಧಿವೇಶನದಿಂದ ಹೊರನಡೆದಿದ್ದ ರಾಜ್ಯಪಾಲರಿಗೆ ತಡೆದು ಅಗೌರವ ಸೂಚಿಸಿರುವ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಜಂಟಿ ಅಧಿವೇಶನದ ಎರಡನೇ ದಿನವಾದ ಶುಕ್ರವಾರ (ಇಂದು) ಕಲಾಪ ಆರಂಭವಾಗುತ್ತಿದ್ದಂತೆ, ಛಲವಾದಿ ನಾರಾಯಣಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿದರು. ಉಭಯ ಸದನವನ್ನು ಉದ್ದೇಶಿಸಿ ಚುಟುಕು ಭಾಷಣ ಮುಗಿಸಿ ಹೊರ ಹೋಗುತ್ತಿದ್ದ ರಾಜ್ಯಪಾಲರ ಎದುರು ಗೂಂಡಾಗಳ ರೀತಿ ವರ್ತಿಸಿ, ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ಮೂಲಕ ಗವರ್ನರ್ಗೆ ಅಗೌರವ ಸೂಚಿಸಿದ್ದಾರೆ. ಹೀಗಾಗಿ, ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ, ದುಂಡಾವರ್ತನೆ ತೋರಿದ ಹರಿಪ್ರಸಾದ್ ವಿರುದ್ಧ ಕ್ರಮ ಆಗಬೇಕು ಎನ್ನುತ್ತ ಒಕ್ಕೋರಲಿನಿಂದ ವಿಪಕ್ಷ ಸದಸ್ಯರು ಎದ್ದು ನಿಂತು ಆಗ್ರಹಿಸಿದರು.
ಛಲವಾದಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಶೇಮ್.. ಶೇಮ್ ಎಂದು ಘೋಷಣೆ ಕೂಗುವ ಮೂಲಕ ತಿರುಗೇಟು ನೀಡಿದರು. ಈ ವೇಳೆ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಲು ಆರಂಭಿಸುತ್ತಿದ್ದಂತೆ, ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ಗೂಂಡಾಗಿರಿ ವರ್ತನೆ ತೋರಿದ ಹರಿಪ್ರಸಾದ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಏನು ಶಿಕ್ಷೆ ಕೊಡುತ್ತೀರಾ, ಮೊದಲು ಅದು ಹೇಳಿ ಎಂದು ಒತ್ತಾಯಿಸಿದರು.
ಗದ್ದಲದ ನಡುವೆಯೂ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸಹ ಭಾಷಣ ಮಾಡಿರಲಿಲ್ಲ, ನಾನು ಸರ್ಕಾರದ ಗುಲಾಮನಲ್ಲ ಎಂದು ಹೇಳಿ ಹೋಗಿದ್ದರು. ಕಾನೂನು ಪ್ರಕಾರ ಹೋರಾಟ ಮಾಡಲಿ. ಅದು ಬಿಟ್ಟು ಗೂಂಡಾಗಿರಿ ಮಾಡುವುದು ಸರಿನಾ? ಗೂಂಡಾಗಿರಿ ಮಾಡಿದವರನ್ನು ಸದನದಿಂದ ಅಮಾನತು ಮಾಡಬೇಕು. ರಾಜ್ಯಪಾಲರಿಗೆ ಅಪಮಾನವಾಗಿದೆ ಎಂದರು.
