ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಮೈಸೂರು: ಸಾಲ ಕೇಳಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ ಸಂಬಂಧ ನನ್ನ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿರುವುದರ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೋಟೆ ಹುಂಡಿ ಮಹಾದೇವ ಎಂಬ ವ್ಯಕ್ತಿ 55 ಲಕ್ಷ ಹಣ ಸಾಲ ನೀಡಿದ್ದು, ಅದನ್ನು ಕೇಳಲು ಹೋದಾಗ ಹೆಚ್.ವಿಶ್ವನಾಥ್ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆ ವ್ಯಕ್ತಿ ನನ್ನ ವಿರುದ್ಧ ದೇವರಾಜ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೋಲಿಸರು ನನಗೆ ನೊಟೀಸ್ ಕೊಟ್ಟಿದ್ದರು. ಅದಕ್ಕೆ ಉತ್ತರ ನೀಡಿದ್ದೇನೆ. ಅನಂತರವೂ ನನ್ನ ವಿರುದ್ಧ ಎಫ್ಐಆರ್ ದಾಖಲು ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದರು.
ಈ ಬಗ್ಗೆ ಹೈಕೋರ್ಟ್ಗೆ ಹೋಗುತ್ತೇನೆ. ನಾನು 50 ವರ್ಷ ರಾಜಕಾರಣದಲ್ಲಿ ಸಾಲ ಮಾಡಿಲ್ಲ. ಕೋಟೆ ಹುಂಡಿ ಮಹಾದೇವನಿಗೆ ಎಲ್ಲಿಂದ ಹಣ ಬಂತು, ಈತ ನನ್ನ ಮನೆಯ ಮುಂದೆ ಬಂದು ನಿಲ್ಲುತ್ತಿದ್ದ. ನಾನು ಯತೀಂದ್ರ ಸಿದ್ದರಾಮಯ್ಯ ನನ್ನ ಹೆಚ್ಎಂ ಎಂದು ಹೇಳಿದ್ದೆ, ಅವರಿಂದಲೇ ಅದಕ್ಕೆ ದ್ವೇಷ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಮಹದೇವಪ್ಪ ಹಾಗೂ ಸಿಎಂ ಮಗನಂತವರು ಬೇರೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬರೀ ಇಂತಹ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದೇ ಹೆಸರಿನಲ್ಲಿ ಕೀಟಲೆ ಕೆಲಸ ಮಾತ್ರ ನಡೆಯುತ್ತಿದೆ. ಈಗಾಗಲೇ ಎಫ್ಐಆರ್ ವಿರುದ್ಧ ಹೈಕೋರ್ಟ್ಗೆ ಹೋಗಿದ್ದೇನೆ ಎಂದರು.
ಎಂಟಿಬಿ ನಾಗರಾಜ್ ರಂಥವರ ಬಳಿ ನಾನು ಏಕೆ ಸಾಲ ಕೇಳಲು ಹೋಗುತ್ತೇನೆ, ನಾನು ರಾಜಕಾರಣಕ್ಕೆ ಬಂದು 50 ವರ್ಷವಾಯಿತು, ಮಾನ ಮರ್ಯಾದೆ ಇಟ್ಟುಕೊಂಡಿದ್ದೇನೆ, ಕೌನ್ಸಿಲ್ ಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮುಂದೆಯೇ ಸತ್ಯವಂತ ಎಂದು ಆಣೆಮಾಡಿ ಹೇಳುತ್ತೀನಿ ಎಂದಿದ್ದೇನೆ ಎಂದರು.



