ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಆದಾಯ 10 ವರ್ಷಗಳ ಹಿಂದೆ ಏನೂ ಇರಲಿಲ್ಲ. ಬಿಜೆಪಿಯವರು ಲಕ್ಷಾಂತರ ಕೋಟಿ ರೂಪಾಯಿ ಕೊಟ್ಟು ಇಡೀ ದೇಶವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನ್ನು ಟೀಕಿಸುವ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಪರಿವಾರ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ, ಜೀವ ಬಲಿದಾನ ಮಾಡಿದ್ದಾರೆ. ಮೋದಿಯವರು ಧರಿಸುವ ಡ್ರೆಸ್ ಎಷ್ಟು ಬೆಲೆಬಾಳುತ್ತದೆ, ಅವರ ವಿದೇಶ ಪ್ರಯಾಣದ ಖರ್ಚನ್ನು ದೇಶದ ಜನತೆ ಮುಂದಿಡಲಿ ಎಂದರು.
ಸುಳ್ಳು, ಮೋಸ, ವಂಚನೆ ಬಿಜೆಪಿಯರ ಅಭ್ಯಾಸ, ವಿದೇಶದಿಂದ ಕಪ್ಪು ಹಣ ತಂದರಾ, ರೈತರ ಆಧಾಯ ದುಪ್ಪಟ್ಟಾಯಿತಾ, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರಾ, ಎಲ್ಲಾ ಬಡವರಿಗೆ ಮನೆ ಕೊಡುತ್ತೇವೆ ಎಂದು ಭರವಸೆ ಕೊಟ್ಟರೇ ಹೊರತು ಅದು ನಿಜವಾಗಲಿಲ್ಲ ಎಂದರು.



