ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ನವದೆಹಲಿ: ಲಾಯರ್ ಕೋಟ್ ಧರಿಸಿ ಕಲ್ಕತ್ತಾ ಹೈಕೋರ್ಟ್ಗೆ ಹಾಜರಾದ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಟಿಎಂಸಿ ನಾಯಕಿ ವಕೀಲೆಯಾಗಿ ನೋಂದಾಸಿಕೊಂಡ ದಾಖಲಾತಿ ಮತ್ತು ವೃತ್ತಿಪರ ಅಭ್ಯಾಸದ ಬಗ್ಗೆ 48 ಗಂಟೆಗಳ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಗುರುವಾರ ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ಗೆ ಸೂಚಿಸಿದೆ.
ಚುನಾವಣಾ ನಂತರದ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲು ಮಮತಾ ಬ್ಯಾನರ್ಜಿ ಅವರು ಇಂದು ಕಲ್ಕತ್ತಾ ಹೈಕೋರ್ಟ್ ಗೆ ಕರಿ ಕೋಟ್ ಧರಿಸಿ ಆಗಮಿಸಿ ಗಮನ ಸೆಳೆದಿದ್ದರು.
2011 ರಿಂದ 2026 ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ನಂತರ ಮಮತಾ ಅವರು ವಕೀಲರಾಗಿ ನೋಂದಾಸಿಕೊಂಡಿದ್ದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು, ಯಾವುದಾದರೂ ಇದ್ದರೆ ಮತ್ತು ಅವರ ಅಭ್ಯಾಸದ ಸ್ಥಿತಿಗತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ನ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದೆ.

