ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಮೈಸೂರು: ಜನಗಣತಿಯಿಂದ ಜನರ ಜೀವನದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದ್ದು, ಇದರಿಂದ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಜನಗಣತಿಯ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮನವಿ ಮಾಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜನಗಣತಿಯು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆ ಪಟ್ಟಿ ಅಥವಾ ಮನೆ ಸರ್ವೆ ಎಪ್ರಿಲ್ 1ರಿಂದ ಮೇ 15ರವರೆಗೆ ಇರಲಿದೆ. ಎರಡನೇ ಹಂತದ ವ್ಯಕ್ತಿವಾರು ಸರ್ವೆ ಮೇ ತಿಂಗಳಲ್ಲಿ ನಡೆಯಲಿದೆ ಎಂದರು.
ಎಪ್ರಿಲ್ 1ರಿಂದ 15ರವರೆಗೆ ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ, ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಡಿಸಿ ಮನವಿ ಮಾಡಿದರು.
ಮನೆ ಮನೆ ಜನಗಣತಿಗಾಗಿ ಜಿಲ್ಲೆಯಲ್ಲಿ 6,013 ಬ್ಲಾಕ್ ರಚಿಸಲಾಗಿದ್ದು, 6,540 ಗಣತಿದಾರರು ಹಾಗೂ 1,207 ಮೇಲ್ವಿಚಾರಕರು ಸೇರಿದಂತೆ ಒಟ್ಟು 7,748 ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜನರ ಆರ್ಥಿಕ ಚಟುವಟಿಕೆ, ಸಾಕ್ಷರತೆ, ಶಿಕ್ಷಣ, ವಸತಿ, ಗೃಹ ಸೌಲಭ್ಯ, ನಗರೀಕರಣ, ಫಲವತ್ತತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಭಾಷೆ, ಧರ್ಮ, ವಲಸೆ, ಅಂಗವೈಕಲ್ಯ ಮತ್ತು ಇತರೆ ಹಲವು ಸಾಮಾಜಿಕ ಸಾಂಸ್ಕೃತಿಕ ದತ್ತಾಂಶ ಪಡೆಯುವುದು ಜನಗಣತಿಯ ಉದ್ದೇಶವಾಗಿದೆ. ಜನಗಣತಿಯಲ್ಲಿ ಗಣತಿದಾರರು ನಿಗದಿಪಡಿಸಿರುವ 33 ಪ್ರಶ್ನೆಗಳನ್ನು ಜನರಿಗೆ ಕೇಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಜನಗಣತಿ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಜನಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

