Updated By: Priyalachhi
ದಾವಣಗೆರೆ: ಇತ್ತೀಚೆಗೆ ನಗರದಲ್ಲಿ ನಡೆದ 290 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣ ಸಂಬಂಧ ವಿದ್ಯಾನಗರ ಠಾಣೆ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 22ರಂದು (ಸೋಮವಾರ) ಡ್ರಗ್ಸ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಮೇಲೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ವಿದ್ಯಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಕಾಂಗ್ರೆಸ್ ಮುಖಂಡ ವೇದಮೂರ್ತಿ ಎಸ್.ಜಿ. (53) ಸೇರಿದಂತೆ, ರಾಜಸ್ಥಾನ ಮೂಲದ ರಾಮ್ ಸ್ವರೂಪ್ (33) ಧೋಲಾರಾಮ್ (36) ಹಾಗೂ ದೇವ್ ಕಿಶನ್ (35) ಎಂಬವರನ್ನು ಬಂಧನ ಮಾಡಲಾಗಿತ್ತು.
ಬಂಧಿತರಿಂದ ಎಂಡಿಎಂಎ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಸೇರಿ ಲಕ್ಷಾಂತರ ಮೌಲ್ಯದ 290 ಗ್ರಾಂ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈಗ ಅನ್ವರ್ ಭಾಷಾ, ಪಾರಸ್, ಕೃಷ್ಣಮೂರ್ತಿ ಹಾಗೂ ಧೋನಿ ಅಲಿಯಾಸ್ ಮಂಜುನಾಥ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಮಾಹಿತಿ: ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್ಪಿ ಉಮಾಪ್ರಶಾಂತ್, ”ಮತ್ತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಈಗ ಬಂಧಿತರಾದವರು ಈ ಹಿಂದೆ ಬಂಧಿಸಲ್ಪಟ್ಟವರಿಂದ ಡ್ರಗ್ಸ್ ಖರೀದಿಸುತ್ತಿದ್ದರು. ಅಲ್ಲದೆ, ಇವರು ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ” ಎಂದರು.
”ಡ್ರಗ್ಸ್ ವಿರುದ್ಧ ದಾವಣಗೆರೆಯಲ್ಲಿ ಪೊಲೀಸರ ಕಾರ್ಯಾಚರಣೆ ಮುಂದುವರೆಯಲಿದೆ. ಅದರಲ್ಲೂ ಹೊಸ ವರ್ಷಾಚರಣೆ ಸಂದರ್ಭ ಇರುವುದರಿಂದ ಸಾರ್ವಜನಿಕರಿಗೆ ಎಲ್ಲಿಯಾದರೂ ಡ್ರಗ್ಸ್ ಮಾರಾಟ, ಸೇವನೆ ಬಗ್ಗೆ ಗೊತ್ತಾದರೆ ಸಿಕ್ಕರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಎಸ್ಪಿ ತಿಳಿಸಿದರು.
ಸಚಿವ ಬೈರತಿ ಪ್ರತಿಕ್ರಿಯೆ: ಪ್ರಕರಣದ ಕುರಿತಂತೆ ದಾವಣಗೆರೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಸುರೇಶ್ “ಆರೋಪಿಗಳದ್ದು ಸಚಿವರುಗಳ ಜೊತೆ ಫೋಟೋ ಇದ್ದರೆ ಅವರು ಆಪ್ತರಾಗುತ್ತಾರಾ? ನಾನು ಕೂಡ ಸಾಕಷ್ಟು ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಆಗ ನಮ್ಮ ಜೊತೆ ಸಾಕಷ್ಟು ಜನರು ಫೋಟೋ ತೆಗೆಸಿಕೊಳ್ಳುತ್ತಾರೆ. ಹಾಗಾದರೆ ಅವರು ನನ್ನ ಆಪ್ತರಾಗುತ್ತಾರಾ?” ಎಂದು ಪ್ರಶ್ನಿಸಿದರು.
