ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ರಾಯ್ಬರೇಲಿ: ‘ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಮತ್ತು ದೇಶದ ಹಿತಾಸಕ್ತಿಗಳನ್ನು ಆಯ್ದ ಕೈಗಾರಿಕೋದ್ಯಮಗಳಿಗೆ ಮಾರಾಟ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ದೇಶದ್ರೋಹಿಗಳು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರವಾದ ಆರೋಪ ಮಾಡಿದ್ದಾರೆ.
ರಾಯ್ಬರೇಲಿಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನೀವೆಲ್ಲ ಎದ್ದು ನಿಂತು ಹೋರಾಡಬೇಕು. ಆರ್ಎಸ್ಎಸ್ ಕಾರ್ಯಕರ್ತರು ನಿಮ್ಮ ಮನೆಗಳಿಗೆ ಬಂದು ಮಾತನಾಡುವಾಗ ಮೋದಿ ಹಾಗೂ ಅಮಿತ್ ಶಾ ದೇಶದ್ರೋಹಿಗಳು ಎಂದು ಹೇಳಬೇಕು. ಅವರು ನಮ್ಮ ದೇಶವನ್ನು ಮಾರಾಟ ಮಾಡುವ ಕೆಲಸ ಮಾಡಿದ್ದಾರೆ. ನಮ್ಮ ಸಂವಿಧಾನ, ಅಂಬೇಡ್ಕರ್, ಮಹಾತ್ಮ ಗಾಂಧಿ ಅವರ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಪ್ರಧಾನಿ ನರೇಗಾವನ್ನು ದುರ್ಬಲಗೊಳಿಸಿದ್ದು, ಜಾತಿ ಗಣತಿಯನ್ನು ನಡೆಸದೆ ದಿನದ 24 ಗಂಟೆಯೂ ಕೈಗಾರಿಕೋದ್ಯಮಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ರಸಗೊಬ್ಬರ ಕೊರತೆಯು ರೈತರನ್ನು ಬಾಧಿಸುತ್ತದೆ. ಸೀಮೆಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಆದರೆ ಅಂಬಾನಿ ಹಾಗೂ ಅದಾನಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇವೆಲ್ಲವೂ ದೇಶದ ನಾಗರಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದಿದ್ದಾರೆ.
‘ಚುನಾವಣೆಗೂ ಮೊದಲು ಇಂಧನ ಬೆಲೆ ಏರಿಕೆಯಾಗುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಬದಲಾಗಿದೆ. ಅಂಬಾನಿ ದೇಶದ ಹೊರಗಡೆಗೂ ಇಂಧನ ರಫ್ತು ಮಾಡುತ್ತಿದ್ದಾರೆ. ಆ ಹಣವನ್ನು ಮೋದಿಗೆ ಹಣಕಾಸಿನ ನೆರವನ್ನು ನೀಡಲು ಬಳಸಲಾಗುತ್ತಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.



