Updated By: Priyalachhi
ಬೆಂಗಳೂರು: ನಾನು ಮತ್ತು ಡಿಸಿಎಂ ಹಿಂದೆ ಒಟ್ಟಿಗೆ ಕೆಲಸ ಮಾಡಿದಂತೆ ಮುಂದೆಯೂ ಒಟ್ಟಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ಗೊಂದಲ್ಲ , ಭಿನ್ನಮತ ಇಲ್ಲ, ಮುಂದೆಯೂ ಇರಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹೈಕಮಾಂಡ್ ಅಣತಿಯಂತೆ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿಎಂ ಮಾತನಾಡಿ, ನಾವಿಬ್ಬರು ಒಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹೈ ಕಮಾಂಡ್ ಹೇಳಿರುವುದರಿಂದ ನಮ್ಮ ಮನೆಗೆ ಉಪಾಹಾರಕ್ಕೆ ಬರಲು ಡಿಕೆಶಿ ಅವರಿಗೆ ಹೇಳಿದೆ. ಬ್ರೇಕ್ ಫಾಸ್ಟ್ ಸಭೆಯಲ್ಲಿ ಉಭಯ ಕುಶಲೋಪರಿ ಚರ್ಚೆ ಆಗಿದೆ. ಅನಗತ್ಯ ಕೆಲವು ಗೊಂದಲ ನಿರ್ಮಾಣ ಆಗಿದ್ದರಿಂದ ನಾವಿಬ್ಬರೇ ಕುಳಿತು ಮಾತನಾಡಿದ್ದೇವೆ. ಡಿಕೆಶಿ ಅವರು ಕೂಡ ಅವರ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದಾರೆ ಎಂದರು.
2028ರ ಚುನಾವಣೆ ಬಹಳ ಮುಖ್ಯ, ಸ್ಥಳೀಯ ಸಂಸ್ಥೆಗಳು, ಜಿಬಿಎ ಚುನಾವಣೆ ಮುಖ್ಯವಾಗಿದೆ. ಅದರ ಬಗ್ಗೆ ಚರ್ಚೆ ಆಗಿದೆ. 2023ರ ಚುನಾವಣೆಯಂತೆಯೇ 2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಚರ್ಚೆ ಮಾಡಿದ್ದೇವೆ. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷವನ್ನು ಸಮರ್ಥವಾಗಿ ಎದುರಿಸುತ್ತೇವೆ. ಸುಳ್ಳು ಅಪಪ್ರಚಾರಗಳನ್ನು, ಆರೋಪಗಳನ್ನು ಮಾಡುವ ಬಿಜೆಪಿ, ಜೆಡಿಎಸ್ ಅವರನ್ನು ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕಾಗಿ ಕಾರ್ಯತಂತ್ರವನ್ನು ಮಾಡಿದ್ದೇವೆ ಎಂದು ಸಿಎಂ ಹೇಳಿದರು.
ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದು ವ್ಯರ್ಥ ಪ್ರಯತ್ನ- ಸಿಎಂ: ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಬಗ್ಗೆ ವರದಿಯಾಗುತ್ತಿದೆ. ಅದನ್ನು ಮಾಡಲು ಅಸಾಧ್ಯ. ಬಿಜೆಪಿ ಜೊತೆ ಇರುವುದು 60 ಜನ ಮಾತ್ರ, ಜೆಡಿಎಸ್ 18 ಶಾಸಕರು ಇದ್ದಾರೆ. ಅವರು ಇಬ್ಬರು ಸೇರಿದರೆ 82 ಆಗಬಹುದು ಅಷ್ಟೇ. ಅದಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. ಅವಿಶ್ವಾಸ ನಿರ್ಣಯ ಮಂಡನೆ ವ್ಯರ್ಥ ಪ್ರಯತ್ನ ಆಗಲಿದೆ ಎಂದು ಸಿಎಂ ತಿಳಿಸಿದ್ದರು.
ಇಬ್ಬರೂ ಹೈ ಕಮಾಂಡ್ ಏನು ಹೇಳುತ್ತಾರೆ ಅದನ್ನು ಕೇಳಲು ತೀರ್ಮಾನಿಸಿದ್ದೇವೆ. ಹೈ ಕಮಾಂಡ್ ಅವರು ಅಧಿವೇಶನ ಇರುವುದರಿಂದ ಈ ಗೊಂದಲ ತಿಳಿಗೊಳಿಸುವ ಕೆಲಸ ಮಾಡಿ ಅಂತ ಸೂಚನೆ ನೀಡಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇಲ್ಲ. ಈಗಲೂ ಇಲ್ಲ. ಆದರೆ ಕೆಲವು ಗೊಂದಲ ಸೃಷ್ಟಿ ಮಾಡಲಾಗಿದೆ. ಕೆಲ ಮಾಧ್ಯಮ ವರದಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಕೆಲ ಶಾಸಕರು ದೆಹಲಿಗೆ ಹೋಗಿದ್ದಾರೆ. ಮಂತ್ರಿ ಸ್ಥಾನಕ್ಕೆ ಲಾಭಿ ಮಾಡಲು ದೆಹಲಿಗೆ ಹೋಗಿರಬಹುದು. ಅದರ ಅರ್ಥ ಅವರು ನಾಯಕತ್ವದ ವಿರೋಧಿ ಅಂತ ಅಲ್ಲ ಎಂದು ಸಿಎಂ ಹೇಳಿದರು.
ನಾವು ಮಾತುಕೊಟ್ಟಂತೆ ನಡೆದುಕೊಂಡಿದ್ದೇವೆ: ಜನರಿಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದೇವೆ. ಜನರ ಆಸೆ, ಆಶೋತ್ತರಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಹೈಕಮಾಂಡ್ ತೀರ್ಮಾನದಂತೆ ಆಡಳಿತ ನಡೆಸುತ್ತಿದ್ದೇವೆ. ಅಧಿವೇಶನದಲ್ಲಿ ಯಾವ ರೀತಿ ಪ್ರತಿತಂತ್ರ ಮಾಡಬೇಕು ಎಂದು ಚರ್ಚಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.



