ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿಯಾದ ಪ್ರಧಾನಿ ಮೋದಿ

0
43

Updated By: Priyalachhi

ನವದೆಹಲಿ: ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್ ಟ್ರೋಫಿ ಜಯಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು.

ಟೂರ್ನಿಯಲ್ಲಿ ಆರಂಭಿಕ ಹಿನ್ನಡೆಗಳ ಬಳಿಕ ಪುಟಿದೆದ್ದ ಬಗೆಯನ್ನು ಪ್ರಧಾನಿ ಶ್ಲಾಘಿಸಿದರು. ಇದೇ ವೇಳೆ ತಂಡ ಸೋತ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಆಟಗಾರ್ತಿಯರ ವಿರುದ್ಧ ಬಂದಿದ್ದ ಟ್ರೋಲ್‌ಗಳನ್ನು ಉಲ್ಲೇಖಿಸಿದರು. ಇದನ್ನೆಲ್ಲ ಧೈರ್ಯದಿಂದ ಎದುರಿಸಿ, ಹೊಸ ಇತಿಹಾಸ ಬರೆಯಲು ದೃಢವಾದ ಮಾನಸಿಕ ಶಕ್ತಿಯನ್ನು ತೋರಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

2017ರ ವಿಶ್ವಕಪ್ ನಂತರ ಮೋದಿ ಅವರೊಂದಿಗಿನ ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಂಡ ನಾಯಕಿ ಹರ್ಮನ್‌ಪ್ರೀತ್ ಕೌರ್, ಆಗ ನಮ್ಮ ತಂಡ ಟ್ರೋಫಿ ಇಲ್ಲದೆ ಬಂದಿತ್ತು. ಆದರೆ ಮುಂದೊಂದಿನ ಯಶಸ್ಸು ಸಾಧಿಸಿ ಭೇಟಿ ಮಾಡುವ ಬಯಕೆ ತಂಡದಲ್ಲಿತ್ತು ಎಂದು ಹೇಳಿದರು.

ಉಪನಾಯಕಿ ಸ್ಮೃತಿ ಮಂಧಾನಾ ಅವರು ಪ್ರಧಾನಿಯ ಮಾತುಗಳು ಪ್ರೇರಣೆಯ ದೊಡ್ಡ ಮೂಲ ಎಂದರು.

ಧಾನಿ ಜೊತೆಗಿನ ಸಂವಾದದ ಸಂದರ್ಭದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ದೀಪ್ತಿ ಶರ್ಮಾ ಅವರು 2017ರಿಂದಲೂ ಮೋದಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದೆ ಎಂದು ತಿಳಿಸಿದರು. ಅಲ್ಲದೇ ಕನಸನ್ನು ನನಸಾಗಿಸಲು ಶ್ರಮಿಸುತ್ತಲೇ ಇರಬೇಕೆಂದು ಆಗ ಮೋದಿ ಹೇಳಿದ್ದನ್ನು ಸ್ಮರಿಸಿದರು.

ಹರ್ಮನ್‌ಪ್ರೀತ್ ಅವರು ಮೋದಿ ಅವರಿಗೆ ಎಲ್ಲ ಸಂದರ್ಭದಲ್ಲೂ ವರ್ತಮಾನದಲ್ಲಿ ಹೇಗಿರುತ್ತೀರಿ ಎಂದು ಕೇಳಿದರು. ಇದಕ್ಕೆ ಪ್ರಧಾನಿ, ಅದು ಜೀವನದ ಭಾಗವಾಗಿದೆ ಮತ್ತು ಕಾಲಾನಂತರದಲ್ಲಿ ಅಭ್ಯಾಸವಾಗಿ ಬಿಟ್ಟಿದೆ ಎಂದರು.

2021ರಲ್ಲಿ ಇಂಗ್ಲೆಂಡ್ ವಿರುದ್ಧ ಹರ್ಲೀನ್ ಡಿಯೋಲ್ ಅವರ ಅದ್ಭುತ ಕ್ಯಾಚ್ ಸೇರಿದಂತೆ ತಂಡದ ಪ್ರಯಾಣದ ಕೆಲವು ಸ್ಮರಣೀಯ ಕ್ಷಣಗಳನ್ನು ಮೋದಿ ಮೆಲುಕು ಹಾಕಿದರು.

ವಿಶ್ವಕಪ್ ಫೈನಲ್ ನಂತರ ಹರ್ಮನ್‌ಪ್ರೀತ್ ಚೆಂಡನ್ನು ಜೇಬಿಗೆ ಹಾಕಿಕೊಂಡದ್ದನ್ನು ಪ್ರಧಾನಿ ಮೋದಿ ಪ್ರೀತಿಯಿಂದ ಉಲ್ಲೇಖಿಸಿದರು. ಇದಕ್ಕೆ ಕೌರ್, ಚೆಂಡು ನನ್ನ ಕೈಗೆ ಬಂದಿದ್ದು ಅದೃಷ್ಟ ಎಂದು ಹರ್ಷ ವ್ಯಕ್ತಪಡಿಸಿದರು.

ಫೈನಲ್‌ನಲ್ಲಿ ಅಮನ್‌ಜೋತ್ ಕೌರ್ ಅವರ ಕ್ಯಾಚ್ ಬಗ್ಗೆಯೂ ಮೋದಿ ಉಲ್ಲೇಖಿಸಿದರು. ಕ್ಯಾಚ್ ವೇಳೆ ನೀವು ಚೆಂಡನ್ನು ನೋಡುತ್ತಿರಬೇಕು, ಆದರೆ ಅದನ್ನು ಹಿಡಿದ ನಂತರ ನೀವು ಟ್ರೋಫಿಯನ್ನು ನೋಡುತ್ತಿರಬೇಕು ಎಂದು ತಮಾಷೆ ಮಾಡಿದರು.

ಕ್ರಾಂತಿ ಗೌಡ್ ಪ್ರಧಾನಿಯವರಿಗೆ ತಮ್ಮ ಸಹೋದರ ಅವರ ದೊಡ್ಡ ಅಭಿಮಾನಿ ಎಂದು ಹೇಳಿದರು. ಇದಕ್ಕೆ ಪ್ರಧಾನಿ ಮೋದಿ ಭೇಟಿಗೆ ಮುಕ್ತ ಆಹ್ವಾನ ನೀಡಿದರು.

ದೇಶಾದ್ಯಂತ ವಿಶೇಷವಾಗಿ ಹುಡುಗಿಯರಲ್ಲಿ ಫಿಟ್ ಇಂಡಿಯಾ ಸಂದೇಶವನ್ನು ಪ್ರಚಾರ ಮಾಡುವಂತೆ ಪ್ರಧಾನಿ ಆಟಗಾರರನ್ನು ಒತ್ತಾಯಿಸಿದರು. ಬೊಜ್ಜು ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಫಿಟ್‌ನೆಸ್ ಮತ್ತು ದೈಹಿಕ ಚಟುವಟಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಇದೇ ವೇಳೆ, ತಮ್ಮ ಶಾಲೆಗಳಿಗೆ ಭೇಟಿ ನೀಡಿ ಯುವ ಮನಸ್ಸುಗಳನ್ನು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವಂತೆಯೂ ತಿಳಿಸಿದರು.

ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಗೆಲುವು ಸಾಧಿಸುವ ಮೂಲಕ ಭಾರತೀಯ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಗೆದ್ದಿದೆ. ಈ ಗೆಲುವಿನ ಎರಡು ದಿನಗಳ ನಂತರ ತಂಡ ಇಂದು ಸಂಜೆ ರಾಷ್ಟ್ರ ರಾಜಧಾನಿಗೆ ಆಗಮಿಸಿತ್ತು.

ಏಕದಿನ ವಿಶ್ವಕಪ್ ಕ್ರಿಕೆಟ್ ಜಯಿಸಿದ ವಿಶ್ವದ ನಾಲ್ಕನೇ ತಂಡವಾಗಿ ಇದೀಗ ಭಾರತ ಗುರುತಿಸಿಕೊಂಡಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಮಹಿಳಾ ತಂಡಗಳು ಈಗಾಗಲೇ ಈ ಪ್ರಶಸ್ತಿ ಗೆದ್ದಿವೆ.

sambrama prabha editor suresh kt

LEAVE A REPLY

Please enter your comment!
Please enter your name here