Updated By: Priyalachhi

ಬೆಂಗಳೂರು: ಸಿಎಂ ಸಿದ್ದರಾಮಯ್ಯ ‘ಹೌದು ಹುಲಿಯಾ’ ಹೋಗಿ ‘ಹೌದು ಇಲಿಯಾ’ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, “ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಅವರೀಗ ಹೌದು ಹುಲಿಯಾ ಬದಲು ಹೌದು ಇಲಿಯಾ ಆಗಿದ್ದಾರೆ.‌ ಲೂಟಿಕೋರ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ಲುತ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವವಾಡುತ್ತಿದ್ದು, ಸರ್ಕಾರಕ್ಕೆ ನೈತಿಕತೆಯೇ ಇಲ್ಲ” ಎಂದು ಟೀಕಿಸಿದರು.

ಇದು 80 ಪರ್ಸೆಂಟ್​ ಸರ್ಕಾರ-ಅಶೋಕ್: “ನಮ್ಮ ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡಿದಾಗ ಆಗ ವಿಪಕ್ಷ ನಾಯಕರಿದ್ದಾಗ ಸಿದ್ದರಾಮಯ್ಯ, ಅವರನ್ನು ಪ್ರತಿದಿನ ಕರೆಸಿಕೊಳ್ಳುತ್ತಿದ್ದರು. ಆದರೆ, ಕೆಂಪಣ್ಣ ಸತ್ತಾಗ ಅವರ ಮುಖ ನೋಡಲು ಸಿದ್ದರಾಮಯ್ಯ ಅವರಾಗಲೀ ಕಾಂಗ್ರೆಸ್ಸಿಗರಾಗಲೀ ಹೋಗಲಿಲ್ಲ. ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್​ ಆರೋಪ ಮಾಡಿದ್ರಿ. ಆದರೆ, ನಿಮ್ಮ ಸರ್ಕಾರದಲ್ಲಿ 80 ಪರ್ಸೆಂಟ್​ ಆರೋಪವಿದೆ. ಕಾಂಟ್ರಾಕ್ಟರ್‌ಗಳು ನಿಮ್ಮ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ನಗರಾಭಿವೃದ್ಧಿ ಸಚಿವರ ಇಲಾಖೆಯಲ್ಲಿ ಮಧ್ಯವರ್ತಿಗಳೇ ತುಂಬಿದ್ದಾರೆ. ಈ ಆರೋಪ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರೆಗೂ ಹೋಗಿದೆ” ಎಂದು ವಾಗ್ದಾಳಿ ನಡೆಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಶ್ರಿ ಅವರನ್ನು ಸರ್ವೇ ಅಧಿಕಾರಿಗಳು ಅಲೆದಾಡಿಸಿರುವುದನ್ನು ಪ್ರಸ್ತಾಪಿಸಿ, “ಕಲಾವಿದರು, ಮಾಜಿ ಸಂಸದರಿಗೆ ಈ ರೀತಿಯಾದರೆ ಜನಸಾಮಾನ್ಯರ ಪಾಡೇನು?. ಆ ಎಡಿಎಲ್‌ಆರ್‌ನ ಕೂಡಲೇ ಸಸ್ಪೆಂಡ್ ಮಾಡಬೇಕು. ಈ ಮೂಲಕ ಸದನದಿಂದಲೇ ರಾಜ್ಯದ ಜನತೆಗೆ ಒಂದು ಸಂದೇಶ ರವಾನೆ ಆಗಬೇಕು” ಎಂದು ಒತ್ತಾಯಿಸಿದರು.

ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಬೇಡ: ಬೆಂಗಳೂರಿನ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿ, “ಸದ್ಯ ಬೆಂಗಳೂರು ಉಳಿದರೆ ಸಾಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಬೇಡ. ಗುಂಡಿ ತುಂಬಿದ ಅಥವಾ ಎಂ‌.ಬಿ.ಪಾಟೀಲ್ ಬಿಯಾಂಡ್ ಬೆಂಗಳೂರು ನಮಗೆ ಬೇಡ. ನಮಗೆ ಕೆಂಪೇಗೌಡರ, ಕೆಂಗಲ್ ಹನುಮಂತಯ್ಯ ಬೆಂಗಳೂರು‌ ಸಾಕು. ಕೊನೆಗೆ ಎಸ್.ಎಂ.ಕೃಷ್ಣ ಬೆಂಗಳೂರಾದರೂ ಸಾಕು. 2.5 ಲಕ್ಷದ ಶಾಲು ಹಾಕೊಂಡ್ ತಿರುಗುವ ಡಿಕೆಶಿ ಕಾಣೆಯಾಗಿದ್ದಾರೆ. ಅವರನ್ನು ನೋಡಿದರೆ ಪುನಿತ್ ರಾಜ್ ಕುಮಾರ್ ಅವರ ಕಾಣದಂತೆ ಮಾಯವಾದನೋ ನಮ್ಮ ಡಿ.ಕೆ.ಶಿವಕುಮಾರ್ ಕಾಣದಂತೆ ಮಾಯವಾದನೋ” ಎಂದು ವ್ಯಂಗ್ಯವಾಡಿದರು.

“ಪೊಲೀಸರು ನ್ಯಾಯ ವ್ಯವಸ್ಥೆಯಲ್ಲಿ ಕರ್ನಾಟಕ ದೇಶದಲ್ಲೇ ಮಾದರಿ ಅಂತ ಪೋಸ್ಟ್​ ಹಾಕಿದ್ದಾರೆ. ಆದರೆ, ಕಾನೂನು ಸುವ್ಯವಸ್ಥೆ ಬಗ್ಗೆ ದೇವರಿಗೆ ಪ್ರೀತಿ. ಅಧಿಕಾರಿಗಳು ಲಂಚ ಪಡೆದು ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತರ ಕೈಗೆ ಸಿಕ್ಕ ವಿಡಿಯೋ ವೈರಲ್​ ಆಗಿದೆ. ಮುಂಚೆ ಟೇಬಲ್​ ಅಡಿ ಲಂಚ ಪಡೆಯುತ್ತಿದ್ದರು. ಆದರೆ, ಇದೀಗ ಸಿಎಆರ್ ಗ್ರೌಂಡ್​ಗೆ ಕರೆಯುತ್ತಿದ್ದಾರೆ. ಇದು ಮುಜುಗರದ ಸಂಗತಿ” ಎಂದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version