Updated By: Priyalachhi

ನವದೆಹಲಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾಗಿದ್ದ ವ್ಯತ್ಯಯದಿಂದಾಗಿ ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಭಾನುವಾರ ಸಂಜೆಯೊಳಗೆ ಅವರ ಟಿಕೆಟ್ ಹಣವನ್ನು ಮರಳಿಸುವಂತೆ ನಾಗರಿಕ ವಿಮಾನಯಾನ ಸಚಿವರು ಸೂಚನೆ ನೀಡಿದ್ದಾರೆ. ಹಾಗೇ ಪ್ರತ್ಯೇಕಿಸಲಾಗಿರುವ ಅವರ ಬ್ಯಾಗೇಜ್​ಗಳನ್ನು ಇನ್ನೆರಡು ದಿನದೊಳಗೆ ಮರಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಕಳೆದ ಐದು ದಿನಗಳಿಂದ ಸುಮಾರು 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು ಮಾಡಿದ್ದು, ಶನಿವಾರ ಕೂಡ ಈ ಅವ್ಯವಸ್ಥೆ ಮುಂದುವರೆದಿದೆ. ಸಮಸ್ಯೆಗೆ ಒಳಗಾಗಿರುವ ಈ ಪ್ರಯಾಣಿಕರಿಗೆ ಯಾವುದೇ ವಿಳಂಬ ಮಾಡದೇ ತಕ್ಷಣಕ್ಕೆ ಹಣ ಪಾವತಿಸುವ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಲಾಗಿದೆ. ಈ ಹಣ ಮರುಪಾವತಿ ಪ್ರಕ್ರಿಯೆ ಭಾನುವಾರ ಸಂಜೆ 8ಗಂಟೆಯೊಳಗೆ ಮುಗಿಯಬೇಕು ಎಂದು ಸಚಿವಾಲಯ ತಿಳಿಸಿದೆ.

ವಿಮಾನಗಳ ರದ್ಧತಿಯಿಂದ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರುವ ಪ್ರಯಾಣಿಕರಿಗೆ ಯಾವುದೇ ಮರುಹೊಂದಿಸುವಿಕೆ ಶುಲ್ಕವನ್ನು ವಿಧಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ವಿಮಾನಯಾನ ಸಂಸ್ಥೆಯ ಹಾರಾಟದಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಪೈಲಟ್‌ಗಳ ವಾರದ ವಿಶ್ರಾಂತಿ ನಿಯಮಗಳನ್ನು ಸಡಿಲಿಸಿತ್ತು. ಆದಾಗ್ಯೂ ಶನಿವಾರ ಕೂಡ ದೇಶದ ಹಲವು ವಿಮಾನ ನಿಲ್ದಾಣದಲ್ಲಿ 400 ವಿಮಾನಗಳು ರದ್ದಾಗಿದ್ದು, ಜನರು ಸಮಸ್ಯೆ ಎದುರಿಸುವಂತೆ ಆಗಿದೆ.

ಇಂಡಿಗೋಗೆ ಪ್ರಯಾಣಿಕರಿಗೆ ಬೆಂಬಲ ಮತ್ತು ಮರುಪಾವತಿ ಸೌಲಭ್ಯ ಘಟಕಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ. ಈ ಘಟಕಗಳು ತೊಂದರೆಗೊಳಗಾದ ಪ್ರಯಾಣಿಕರನ್ನು ಮುಂಚಿತವಾಗಿ ಸಂಪರ್ಕಿಸುವ ಕಾರ್ಯವನ್ನು ನಿರ್ವಹಿಸಲಿದೆ. ಮರುಪಾವತಿ ಮತ್ತು ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಪ್ರಕ್ರಿಯೆಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುತ್ತವೆ. ಕಾರ್ಯಾಚರಣೆಗಳು ಸ್ಥಿರವಾಗುವವರೆಗೆ ಸ್ವಯಂಚಾಲಿತ ಮರುಪಾವತಿ ವ್ಯವಸ್ಥೆಯು ಸಕ್ರಿಯವಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version