Updated By: Priyalachhi

ಬೆಳಗಾವಿ: ಮದ್ಯಪಾನ ವಿಪರೀತ ಸೇವನೆಯಿಂದ ಮನುಷ್ಯನ ಯಕೃತ್ (ಲಿವರ್) ತೊಂದರೆ ಜೊತೆಗೆ ಜಾಂಡೀಸ್ ಖಾಯಿಲೆಗೆ ತುತ್ತಾಗಲಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆಗೆ ಒದಗಿಸುವ ಉದ್ದೇಶದಿಂದ ಅಬಕಾರಿ ಇಲಾಖೆಗೆ ಬರುವ ಆದಾಯದಲ್ಲಿ ಶೇ.20ರಷ್ಟು ಹಣವನ್ನು ಮೀಸಲಿಡಬೇಕು ಎಂದು ವಿಧಾನಪರಿಷತ್​ನಲ್ಲಿ ವಿರೋಧ ಪಕ್ಷ ಒತ್ತಾಯಿಸಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಸಿ.ಟಿ.ರವಿ, ಶಿವಕುಮಾರ್, ರಮೇಶ್ ಬಾಬು, ಭಾರತಿ ಶೆಟ್ಟಿ. ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇನ್ನಿತರರು ನಿಯಮ 330ರ ಅಡಿ ಮಾತನಾಡಿದರು.

ಮೊದಲಿಗೆ ರವಿಕುಮಾರ್ ಮಾತನಾಡಿ, ಮದ್ಯಸೇವನೆಯಿಂದ ಶೇ.3ರಷ್ಟು ಜನರು ರೋಗಕ್ಕೆ ತುತ್ತಾಗುತ್ತಿದ್ಧಾರೆ. ವರ್ಷಕ್ಕೆ 43 ಸಾವಿರ ಕೋಟಿ ಆದಾಯಕ್ಕೆ ಸರ್ಕಾರ ಗುರಿ ಇಟ್ಟುಕೊಂಡಿದೆ. ಆದರೂ ಶೇ.20ರಷ್ಟು ಆದಾಯ ಕಡಿಮೆಯಾಗಿದೆ. ಮದ್ಯಸೇವನೆಯಿಂದ ಜಾಂಡಿಸ್, ಯಕೃತ್​ಗೆ ತೊಂದರೆಯಾಗಿ ಚಿಕಿತ್ಸೆಗೆ ಹೆಚ್ಚು ಖರ್ಚಾಗುತ್ತಿದೆ. ಹೀಗಾಗಿ ಅಬಕಾರಿ ಇಲಾಖೆಗೆ ಬರುವ ಆದಾಯದಲ್ಲಿ ಶೇ.20ರಷ್ಟು ಮದ್ಯಪ್ರಿಯರ ಅನಾರೋಗ್ಯ ಚಿಕಿತ್ಸೆಗೆ ಹಣ ಮೀಸಲಿಡಿ ಎಂದು ಒತ್ತಾಯಿಸಿದರು.

ಜಾಂಡಿಸ್​ನಿಂದ ಮದ್ಯಪ್ರಿಯರು ಬೇಗ ಸಾಯುತ್ತಿದ್ದಾರೆ. ರೋಗದ ಚಿಕಿತ್ಸೆಗೆ ಸರ್ಕಾರ ಹಣ ನೀಡಿದರೆ ಹೆಚ್ಚು ಕುಡಿಯಲೂಬಹುದು. ಹೆಚ್ಚು ಆದಾಯ ಪಡೆಯಬಹುದು. ಮದ್ಯಸೇವನೆಯಿಂದ ಶೇ.3ರಷ್ಟು ಅಂದರೆ ದೇಶದಲ್ಲಿ 15 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಐವರಲ್ಲಿ ಓರ್ವ ಮದ್ಯಸೇವನೆ ಮಾಡಿ ಜಾಂಡಿಸ್ ಖಾಯಿಲೆಯಿಂದ ಮರಣ ಹೊಂದುತ್ತಿದ್ಧಾರೆ. ಪಂಚ ಗ್ಯಾರಂಟಿ ಯೋಜನೆಗಳು ನಡೆಯುತ್ತಿರುವುದರಿಂದ ಮದ್ಯಪ್ರಿಯರಿಂದ ಯೋಗದಾನ ಹೆಚ್ಚಿದೆ. ಆದಾಯದಲ್ಲಿ ರೋಗದ ಚಿಕಿತ್ಸೆಗೆ ಶೇ. 20ರಷ್ಟು ಮೀಸಲಿಡಿ ಎಂದು ಒತ್ತಾಯಿಸಿದರು.

ಆಲ್ಕೋಹಾಲ್ ಅಂಗಡಿ ಮುಂದೆ ಕ್ಯೂ ನಿಲ್ಲೋದು ಒಳ್ಳೆ ಬೆಳವಣಿಗೆಯಲ್ಲ; ಮದ್ಯ ಸೇವನೆಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದಲ್ಲಿ ನಿರ್ಬಂಧ ಇದೆ. ಇದಕ್ಕೆ ಆ ಸಮುದಾಯವನ್ನು ಪ್ರಶಂಸಿಸುತ್ತೇನೆ. ಇಂದು ಧಾರ್ಮಿಕ ಕೇಂದ್ರ ಹಾಗೂ ಮಠದ ಪಕ್ಕದಲ್ಲಿ ಮದ್ಯದ ಬಾಟಲ್ ಸಿಗುತ್ತವೆ. ಹಾಲಿನ ಅಂಗಡಿ ಮುಂದೆ ಕ್ಯೂ ನಿಲ್ಲುವುದು ಒಳ್ಳೆಯ ಸಂಕೇತ. ಆಲ್ಕೋಹಾಲ್ ಅಂಗಡಿ ಮುಂದೆ ಕ್ಯೂ ನಿಲ್ಲೋದು ಒಳ್ಳೆ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬದುಕುವ ಹಕ್ಕನ್ನು ಕಸಿಯುವ ಅಬಕಾರಿ ನಿಯಮ ಬೇಕಾ?: ಸಿ.ಟಿ.ರವಿ ಮಾತನಾಡಿ, ಜನರ ನೆಮ್ಮದಿ, ಬದುಕುವ ಹಕ್ಕನ್ನು ಕಸಿಯುವ ಅಬಕಾರಿ ನಿಯಮ ಬೇಕಾ? ಅಬಕಾರಿ ಇಲಾಖೆಯು ಪ್ರತಿ ಜಿಲ್ಲೆಗೆ ಮದ್ಯ ಮಾರಾಟದ ಗುರಿ ನೀಡಿರುವುದು ಯಾಕೆ? ಹಳ್ಳಿಗಳಲ್ಲಿರುವ ಗೂಡಂಗಡಿಗಳಲ್ಲಿ ನಕಲಿ ಮದ್ಯ ಮಾರಾಟದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ಧಾರೆ. ಕುಡಿಯುವುದನ್ನು ಪ್ರಮೋಷನ್ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದರು.

ಇಂದು ನಕಲಿ ಬ್ರ್ಯಾಂದಿ ಮಾರಾಟ ನಿಲ್ಲಿಸಬೇಕು. ಮಿಲಿಟರಿ ಕೋಟಾ ಹೆಸರಿನಲ್ಲಿ ನಕಲಿ ಮದ್ಯ ಮಾರಾಟವಾಗುತ್ತಿದೆ. ಸರ್ಕಾರ ಮನೆಹಾಳು ಮಾಡುವ ಅಬಕಾರಿ ನೀತಿ ಪ್ರಾಣ ತೆಗೆಯುತ್ತಿದೆ. ಸರ್ಕಾರ ಜನರಿಗೆ ಬದುಕಿನ ಗ್ಯಾರಂಟಿ ಕೊಡಿ. ಚಿಕ್ಕಮಗಳೂರು ಭಾಗಕ್ಕೆ ಬರುವವರು ಬಹುತೇಕರು ಬರುವಾಗಲೇ ಎಣ್ಣೆ ಹಿಡಿದುಕೊಂಡು ಬರುತ್ತಿದ್ಧಾರೆ. ಆರೋಗ್ಯಕ್ಕೆ ಹಾನಿಯಾಗುವ ಮದ್ಯವನ್ನು ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಳತೆ ಮೀರಿದರೆ ಆಪತ್ತು: ಭಾರತಿ ಶೆಟ್ಟಿ ಮಾತನಾಡಿ, ಕುಡಿತದಿಂದಲೇ ಸಂಸಾರದಲ್ಲಿ ಗಲಾಟೆಯಾಗುತ್ತಿದೆ. ಕೌಟುಂಬಿಕ ಕಲಹ ಹೆಚ್ಚಾಗುತ್ತಿದೆ. ಒಂದು ಬಾಟಲಿ ಬಿಯರ್ ಕುಡಿದರೆ ಲಿವರ್ ಹಾಳಾಗಲ್ಲ. ಹಾರ್ಡ್ ಡ್ರಿಂಗ್ಸ್ ಹೊಡೆದರೆ ಕಿಕ್ ಹೊಡೆಯಲಿಲ್ಲವೆಂದರೆ ಇದರ ಜೊತೆಗೆ ಕಿಕ್ ಹೊಡೆಯಲು ಪುರುಷರು ಬಿಯರ್ ಕುಡಿಯುತ್ತಾರೆ. ಕುಡಿದ ಮೇಲೆ ಏನು ಮಾಡುತ್ತಾರೆ ಅಂತ ಕುಡಿದವರಿಗೆ ಗೊತ್ತಾಗಲ್ಲ. ಯುವಕರು ಅಳತೆ ಮೀರದಂತೆ ಕುಡಿಯಬೇಕು. ಯುವಜನತೆಯನ್ನು ಎಚ್ಚರಿಸಬೇಕಾಗುತ್ತದೆ ಎಂದರು.

ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ: ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಪರವಾನಗಿ ಹೊಂದಿರದ ಮದ್ಯ ಮಾರಾಟ ಮಳಿಗೆ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಪದೇ ಪದೆ ಇಂತಹ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಬದುಕುವ ಗ್ಯಾರಂಟಿ ಕೊಡಿ ಎಂದರು.

ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಮಾತನಾಡಿ, ಅಬಕಾರಿ ಇಲಾಖೆಯಿಂದ ಶೇ.20ರಷ್ಟು ಆದಾಯ ನೀಡಿ ಎಂದು ಸರ್ಕಾರಕ್ಕೆ ಒತ್ತಾಯದ ಜೊತೆಗೆ ಕೇಂದ್ರ ಸರ್ಕಾರ ಸಹ ಶೇ.20ರಷ್ಟು ಹಣ ಮೀಸಲಿಡುವಂತೆ ಒತ್ತಾಯಿಸಿ ಎಂದು ತಿವಿದರು.

ಬಿಯರ್ ಮಾರಾಟ ಕಡಿಮೆ: ಈ ಬಗ್ಗೆ ಸಭಾನಾಯಕ ಎನ್.ಎಸ್.ಬೋಸರಾಜ್ ಮಾತನಾಡಿ, ನಕಲಿ ಮದ್ಯ ಮಾರಾಟ, ನಷ್ಟ ಸೋರಿಕೆ, ದಲ್ಲಾಳಿಗಳಿಂದ ಮದ್ಯ ಮಾರಾಟವನ್ನು ತಪ್ಪಿಸಿ ಅಬಕಾರಿ ಇಲಾಖೆಯು ಈ ವರ್ಷ 46 ಸಾವಿರ ಕೋಟಿ ರೂಪಾಯಿ ಗುರಿ ಇಟ್ಟುಕೊಂಡಿದೆ. ಈ ಮೂಲಕ ಯಾವುದೇ ಮಾರಾಟ ಗುರಿ ಇಟ್ಟುಕೊಂಡಿಲ್ಲ. ಬರುವ ಆದಾಯವು ಬಜೆಟ್​ನಲ್ಲಿ ಘೋಷಿಸಲಾಗಿರುವ ಹಲವು ಯೋಜನೆಗಳಿಗೆ ವಿನಿಯೋಗವಾಗಲಿದೆ ಎಂದರು.

ಶೀತ ವಾತಾವರಣ ಹೆಚ್ಚಾಗಿದ್ದರಿಂದ ಈ ವರ್ಷ ಬಿಯರ್ ಹೆಚ್ಚು ಮಾರಾಟವಾಗಿಲ್ಲ. ಎಲ್ಲ ಸರ್ಕಾರಗಳು ಮದ್ಯ ಮಾರಾಟ ಬೆಲೆಯನ್ನು ಹೆಚ್ಚಿಸಿಕೊಂಡು ಬರುವ ಆದಾಯವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಲಿದೆ. ಮದ್ಯ ಸೇವಿಸಿ ಅನಾರೋಗ್ಯ ಒಳಗಾದವರಿಗೆ ಪ್ರತಿ ತಾಲೂಕಿನಲ್ಲಿ ಆಸ್ಪತ್ರೆ ತೆರೆಯಲಾಗಿದೆ. ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿದ್ದು, ಇಲ್ಲಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಬೇಕು. ಹೀಗಾಗಿ ಶೇ.20ರಷ್ಟು ಹಣ ಮೀಸಲಿಡುವುದು ಸೂಕ್ತವಲ್ಲ ಎಂದು ಹೇಳಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version