Updated By: Priyalachhi
ಬೆಳಗಾವಿ: “ಎಲ್ಲಾ ಪಕ್ಷಗಳ ಶಾಸಕರು ತಮ್ಮ ರಾಜಕಾರಣ ಪಕ್ಕಕ್ಕಿಟ್ಟು ಕಿತ್ತೂರು ಕರ್ನಾಟಕ ಅಭಿವೃದ್ಧಿ ಪರವಾದ ಚಿಂತನೆಯನ್ನು ಹತ್ತು ದಿನಗಳ ಅಧಿವೇಶನದಲ್ಲಿ ಮಾಡಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು.
ಸುವರ್ಣ ವಿಧಾನಸೌಧ ಬಳಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಕಿತ್ತೂರು ಕರ್ನಾಟಕ ಏಳಿಗೆ ಮತ್ತು ಅಭಿವೃದ್ಧಿ ಕಡೆಗೆ ಆಡಳಿತ, ವಿಪಕ್ಷದ ಎಲ್ಲ ಶಾಸಕರು ವಿಚಾರ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರ ಮೇಲೂ ಜವಾಬ್ದಾರಿ ಇದೆ. ನಮ್ಮ ಭಾಗ ಬಹಳಷ್ಟು ಹಿಂದುಳಿದಿದೆ. ಈ ಬಗ್ಗೆ ನಮಗೂ ಅರಿವಿದೆ. ಸಾಕಷ್ಟು ನೀರಾವರಿ ಯೋಜನೆಗಳು ಬರಬೇಕು. ಹೆಚ್ಚಿನ ಅನುದಾನ ಈ ಭಾಗಕ್ಕೆ ಬರಬೇಕಿದೆ” ಎಂದರು.
“ಅಖಂಡ ಕರ್ನಾಟಕದ ಚಿಂತನೆಯನ್ನು ನಾವೆಲ್ಲಾ ಹೊಂದಿರಬೇಕು. ಅಖಂಡ ಕರ್ನಾಟಕ ನಮ್ಮ ಹೆಮ್ಮೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಪ್ರಶ್ನೆ ಬರುವುದಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಮಾತು ಕೂಡ ಸರಿ ಅಲ್ಲ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸೋಣ, ಗಮನಹರಿಸೋಣ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅಧಿವೇಶನ ವೇಳೆ ಬಿಜೆಪಿ ಬೃಹತ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, “ರೈತರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. 11 ತಿಂಗಳು ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯಿತು. ಹೋರಾಟದಲ್ಲಿ 120 ಜನರು ಮೃತಪಟ್ಟರು. ಆ ಪಕ್ಷದ ಗೃಹಸಚಿವರ ಮಗ ರೈತರ ಮೇಲೆ ಗಾಡಿ ಹಾಯಿಸಿಕೊಂಡು ಹೋಗಿದ್ದು, ರೈತರು ಸತ್ತಿದ್ದು, ಹೋರಾಟ ಹತ್ತಿಕ್ಕಲು ಏನೆಲ್ಲಾ ಕಸರತ್ತು ಮಾಡಿದ್ದರು ಎಂಬುದನ್ನು ಮಾಧ್ಯಮಗಳೇ ತೋರಿಸಿವೆ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ಚುನಾವಣೆ ಮುಂಚೆ ಮಹದಾಯಿ ಯೋಜನೆ ಜಾರಿ ಆಗಿದೆ ಅಂತಾ ಸಿಹಿ ಹಂಚಿದ್ದರು. ಈ ರೀತಿ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿಯವರನ್ನು ರೈತರು ನಂಬಬಾರದು” ಎಂದರು.
“ಜಿಲ್ಲಾ ವಿಭಜನೆ ಸಂಬಂಧ ಮೊನ್ನೆ ಮಂಗಳೂರಿನಲ್ಲಿ ನಾನು ಮತ್ತು ಸತೀಶ ಜಾರಕಿಹೊಳಿ ಅವರು ಕೂಡಿದಾಗ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇವೆ. ಆಗ ಮುಖ್ಯಮಂತ್ರಿಗಳು ಎಲ್ಲಾ ಶಾಸಕರನ್ನು ಕರೆದು ಜಿಲ್ಲಾ ವಿಭಜನೆ ಬಗ್ಗೆ ಮಾತನಾಡುತ್ತೇನೆ ಅಂತಾ ಹೇಳಿದ್ದಾರೆ. ಯಾಕೆಂದರೆ ಸರ್ಕಾರದ ಯೋಜನೆಗಳು ಎಲ್ಲಾ ಕಡೆ ತಲುಪಬೇಕು. ಆಡಳಿತ ದೃಷ್ಟಿಯಿಂದ ಗೂಡ್ ನ್ಯೂಸ್ ಸಿಗಬಹುದು. ಆಡಳಿತದ ಹಿತದೃಷ್ಟಿಯಿಂದ ಎಲ್ಲರೂ ಕೈ ಜೋಡಿಸೋಣ” ಎಂದರು.

