Updated By: Priyalachhi
ಬೆಂಗಳೂರು: ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು. ತಿಳಿಯದೇ ಮಾತನಾಡಿದರೆ ಇಂಪ್ಯಾಕ್ಟ್ ಹೆಚ್ಚುತ್ತದೆ. ಸಮಾಜದಲ್ಲಿ ಏನಾಗುತ್ತೆ ಅರಿತು ಮಾತನಾಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಬಳ್ಳಾರಿ ಘರ್ಷಣೆಯಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮರಣೋತ್ತರ ಪರೀಕ್ಷೆಯನ್ನು 2 ಬಾರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು. ತಿಳಿಯದೇ ಮಾತನಾಡಿದರೆ ಇಂಪ್ಯಾಕ್ಟ್ ಹೆಚ್ಚುತ್ತದೆ. ಸಮಾಜದಲ್ಲಿ ಏನಾಗುತ್ತೆ ಅರಿತು ಮಾತನಾಡಬೇಕು. ಈಗಾಗಲೇ ಡಾಕ್ಟರ್ ಅದರ ಬಗ್ಗೆ ಹೇಳಿದ್ದಾರೆ. ಎರಡು ಬಾರಿ ಪೋಸ್ಟ್ ಮಾರ್ಟಂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನ ನಾಯಕರು ನೋಡಿದ್ದಾರಾ?. ನಾನು ವೈದ್ಯರ ಮಾತನ್ನು ಒಪ್ತೇನೆ ಎಂದರು.
ನಾನು ಗೃಹ ಸಚಿವನಾಗಿ ಹೇಳ್ತೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು?. ಏನು ತೀರ್ಮಾನ ಮಾಡಬೇಕು ಗೊತ್ತಿದೆ. 38 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನನಗೂ ಅಪಾರ ಅನುಭವವಿದೆ. ಕಾನೂನು ಸುವ್ಯವಸ್ಥೆ ಕಾಪಾಡೋದಕ್ಕೆ ನಾನು ಎಲ್ಲ ರೀತಿಯ ತೀರ್ಮಾನ ಮಾಡಿದ್ದೇನೆ. ಕೇವಲ ಒಂದು ಘಟನೆ ಆಧಾರದ ಮೇಲೆ ಸರ್ಟಿಫಿಕೇಟ್ ಕೊಡೋದಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಜನಪ್ರಿಯ ಸಿಎಂ ಆಗಿದ್ದಾರೆ: ಅರಸರ ದಾಖಲೆ ಸಿಎಂ ಮುರಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಜನಪ್ರಿಯ ಸಿಎಂ ಆಗಿದ್ದಾರೆ. ದೇವರಾಜ ಅರಸರ ದಾಖಲೆ ಮುರಿಯುತ್ತಿದ್ದಾರೆ. ಅರಸರು 2,792 ದಿನ ಸಿಎಂ ಆಗಿದ್ದರು. ಅದನ್ನು ಈಗ ಸಿದ್ದರಾಮಯ್ಯ ಅಳಿಸಿದ್ದಾರೆ. ಇವತ್ತಿಗೆ ಆ ದಾಖಲೆ ಸಮವಾಗಿದೆ. ನಾನು ಸಿಎಂ ಅವರನ್ನು ಅಭಿನಂದಿಸುತ್ತೇನೆ. ಸೋನಿಯಾ, ರಾಹುಲ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಅವರು ಈ ದಾಖಲೆ ಮಾಡೋಕೆ ಅವಕಾಶ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ವರಿಷ್ಠರಿಗೂ ಅಭಿನಂದಿಸುತ್ತೇನೆ ಎಂದರು.
