Updated By: Priyalachhi
ಹುಬ್ಬಳ್ಳಿ: ದೇವರಾಜ ಅರಸು ಅವರು ಎರಡು ಅವಧಿ ಗ್ಯಾಪ್ ಇಲ್ಲದೇ ಸಿಎಂ ಆಗಿ ದಾಖಲೆ ಮಾಡಿದರು. ಆದರೆ, ಸಿದ್ದರಾಮಯ್ಯನವರು ಸತತ ಎರಡು ಅವಧಿ ಸಿಎಂ ಆಗಿಲ್ಲ, ಗ್ಯಾಪ್ ಇದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಖಲೆ ಮಾಡುವುದು ಮುಖ್ಯವಲ್ಲ. ಜನಪರ ಆಡಳಿತ ಎಷ್ಟರಮಟ್ಟಿಗೆ ನೀಡಿದರು ಅನ್ನೋದು ಮುಖ್ಯ. ಈಗಿನ ಸಿದ್ದರಾಮಯ್ಯನವರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಜನಪರ ಯೋಜನೆಗಳಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ಕೇಂದ್ರ ಸರ್ಕಾರಗಳ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
ಸಿಎಂಗೆ ಯಾವ ನೈತಿಕತೆ ಇದೆ?: ಬೆಳಗಾವಿ – ಧಾರವಾಡ ರೈಲ್ವೆ ಯೋಜನೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದ ನಿಂತಿದೆ. ದಾಖಲೆಯ ಸಿಎಂ ಅವಧಿ ಪೂರೈಸಿದ್ದೇನೆ ಎನ್ನುವುದಕ್ಕೆ ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ?. ಬಳ್ಳಾರಿಯಲ್ಲಿ ಅವರದ್ದೇ ಶಾಸಕನ ಗಲಾಟೆಯಿಂದ ಹಿಡಿದು ಬೆಂಗಳೂರಿನ ಮಾಲಾಧಾರಿಗಳ ಮೇಲೆ ಕಲ್ಲೆಸೆತ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆಯಿಂದ ಅಭಿವೃದ್ಧಿ ಸೇರಿ ವಾಣಿಜ್ಯ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಕ್ಕದ ಆಂಧ್ರದಲ್ಲಿನ ಸಿಎಂ ಅವರು ವಿದೇಶಿ ಬಂಡವಾಳ ಕಂಪನಿಗಳನ್ನು ತಮ್ಮ ರಾಜ್ಯದತ್ತ ಸೆಳೆಯುತ್ತಿದ್ದಾರೆ ಎಂದು ಹೇಳಿದರು.
