ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಸಚಿವ ಹುದ್ದೆಗೆ ಬೇಡಿಕೆ ಇಡುವುದು ಎಂದರೆ ಗ್ಯಾಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ, ಎರಡು ಮೂರು ಬಾರಿ ಶಾಸಕರಾದವರು ಖಂಡಿತವಾಗಿಯೂ ಬಹಿರಂಗವಾಗಿಯೇ ತಮಗೆ ಸಚಿವ ಸ್ಥಾನ ಸಿಗಬೇಕೆಂದು ಕೇಳಬಹುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವಾಕಾಂಕ್ಷಿ ಶಾಸಕರ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಶಾಸಕರಾಗಿ ಎರಡು ಮೂರು ಬಾರಿ ಗೆದ್ದಿದ್ದಾರೆ. ಅವರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನ ಕೇಳೋದ್ರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದರ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಬಹಿರಂಗವಾಗಿ ಕೇಳಬಹುದು, ಅದೇನು ಗ್ಯಾಂಬ್ಲಿಂಗ್ ಅಲ್ಲ. ಅವರಿಗೆ ಅರ್ಹತೆ ಇದೆ ಕೇಳ್ತಾರೆ. ನಾಯಕತ್ವ ವಿಚಾರ ಇರಲಿ, ಪುನಾರಚನೆ ಇರಲಿ ಹೈಕಮಾಂಡ್ ಮಾತ್ರವೇ ತೀರ್ಮಾನ ಮಾಡಬೇಕು. ಹೈಕಮಾಂಡ್ ಎಲ್ಲ ಗಮನಿಸಿದೆ, ಅವರಿಗೆ ಎಲ್ಲ ಗೊತ್ತಿದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಅಂತ ಹೈಕಮಾಂಡ್ಗೆ ಗೊತ್ತಿದೆ, ಅವರು ಮಾಡ್ತಾರೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿನಾ ಎಂದು ಕೇಳಿದಾಗ, ಈಗ ಪುನಾರಚನೆ ಚರ್ಚೆ ಆಗ್ತಿದೆ ಅಷ್ಟೇ. ಅಧ್ಯಕ್ಷ ಸ್ಥಾನ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

