Updated By: Priyalachhi
ಮಂಡ್ಯ : ನವೆಂಬರ್ ಕ್ರಾಂತಿನೂ ಇಲ್ಲ, ಸಂಕ್ರಾಂತಿ ಕ್ರಾಂತಿನೂ ಇಲ್ಲ, ಯುಗಾದಿಗೂ ಇಲ್ಲ. 2028ಕ್ಕೆ ಮತ್ತೆ ನಾವೇ, ಕಾಂಗ್ರೆಸ್ ಕ್ರಾಂತಿ ಎಬ್ಬಿಸುತ್ತೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಈ ಕುರಿತು ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂದು ಅತ್ಯಂತ ಸಂತೋಷದ ದಿನ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನ. ನಾವು ಕೂಡ ಆಚರಣೆ ಮಾಡಿ ಗೌರವ ಸಲ್ಲಿಸಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮನೆಗಳ ಒತ್ತುವರಿ ತೆರವು ಸಂಬಂಧ ಕೇರಳ ಸಿಎಂ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಬೇರೆ ರಾಜ್ಯದವರು ಇರುತ್ತಾರೆ.
ನಾವು ಕೇರಳಕ್ಕೆ ಹೋಗಿ ಮನಸ್ಸಿಗೆ ಬಂದಾಗೆ ಮಾಡೋಕೆ ಆಗುತ್ತಾ?.ಕಾನೂನಿನ ವ್ಯವಸ್ಥೆಯಲ್ಲಿಯೇ ನಾವು ಇರಬೇಕು. ನಾವು ಯಾವ ಸಮುದಾಯದ ವಿರೋಧಿಯೂ ಅಲ್ಲ. ಕಾಂಗ್ರೆಸ್ ಎಲ್ಲ ಸಮುದಾಯದ ಹಿತವನ್ನ ಬಯಸುತ್ತೆ. ಅನ್ಯಾಯ, ತೊಂದರೆ ನೀಡುವ ನಿಲುವು ನಮ್ಮ ಪಕ್ಷದಲ್ಲಿ ಇಲ್ಲ. ಚುನಾವಣೆ ಹಿನ್ನೆಲೆ ಕೇರಳ ಸಿಎಂ ಆ ಮಾತು ಹೇಳಿರಬಹುದು. ನಮ್ಮ ಪಕ್ಷ ಒಂದು ಸಮುದಾಯವನ್ನು ಇಟ್ಟುಕೊಂಡು ಹೋಗಿಲ್ಲ. ಕಾನೂನಿನಡಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಯುಪಿಯಲ್ಲಿ ರಾತ್ರಿ ಕಂಡಿದ್ದು ಬೆಳಗ್ಗೆ ಇರಲ್ಲ. ಬೆಳಗ್ಗೆ ಕಂಡಿದ್ದು ರಾತ್ರಿ ಇರಲ್ಲ. ಬೇಕಿದ್ರೆ ಕೇರಳ ಸಿಎಂ ಅವರು ಯುಪಿ ಬಗ್ಗೆ ಮಾತನಾಡಲಿ ಎಂದರು.
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಡ್ರಗ್ಸ್ ಸೀಜ್ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕ ಪೊಲೀಸರ ಸಹಕಾರದಿಂದಲೇ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿದ್ದಾರೆ. ಆ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಇಡೀ ಪ್ರಪಂಚದಲ್ಲೆ ಡ್ರಗ್ ಮಾಫಿಯಾ ಇದೆ. ಮಾಫಿಯಾದವರು ದೊಡ್ಡ ದೊಡ್ಡ ಲೀಡರ್ ಜೊತೆಯೇ ಓಡಾಡ್ತಿರ್ತಾರೆ. ಅವರನ್ನೂ ಹಿಡಿಯೋಕೆ ಕಾನೂನು ವ್ಯಾಪ್ತಿಗೂ ಬರ್ತಿಲ್ಲ. ಕಾನೂನು ಭದ್ರತೆಯಲ್ಲಿಯೇ ಯಾರು ಕಂಡು ಹಿಡಿಯದಂತೆ ಡ್ರಗ್ ಮಾಫಿಯಾ ನಡೆಯುತ್ತಿದೆ. ಎರಡು ವರ್ಷದಲ್ಲಿ 50 ಕಡೆ ನಮ್ಮ ಪೊಲೀಸರು ದಾಳಿ ಮಾಡಿದ್ದಾರೆ. ಮಹಾರಾಷ್ಟ್ರದವರು ಬೆಂಗಳೂರಿನಲ್ಲಿ ಎರಡು ಕಡೆ ದಾಳಿ ಮಾಡಿದ್ರೆ ತಪ್ಪೇನು?. ನಾವು ಯಾವುದನ್ನೂ ಲಘುವಾಗಿ ಪರಿಗಣಿಸಲ್ಲ. ಸರ್ಕಾರ ನಮ್ಮ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ವಿರುದ್ದ ನಮ್ಮ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
