ಬೆಂಗಳೂರು: ರಾಜಧಾನಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆ (MSW) ಯೋಜನೆಗೆ ಸಂಬಂಧಿಸಿದಂತೆ ಟಿಪ್ಪಿಂಗ್ ಶುಲ್ಕ ನಿಗದಿಯಲ್ಲಿ ಭಾರೀ ಅಕ್ರಮವೊಂದು ಬೆಳಕಿಗೆ ಬಂದಿದೆ. ಈ ಕುರಿತು ಸಮಗ್ರ ತನಿಖಾ ವರದಿ ಪ್ರಕಟಿಸಿರುವ ದಿ ಫೈಲ್ ಕನ್ನಡ ತನಿಖಾ ನ್ಯೂಸ್ ಪೋರ್ಟಲ್ ಪ್ರಕರಣದ ಗಂಭೀರತೆಯನ್ನು ಜನರ ಮುಂದಿಟ್ಟಿದೆ.
ಆರ್ಥಿಕ ಇಲಾಖೆಯ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ವಿರೋಧದ ನಡುವೆಯೂ ರಾಜ್ಯ ಸಚಿವ ಸಂಪುಟವು ಸದ್ದಿಲ್ಲದೇ 39,437.37 ಕೋಟಿ ರೂಪಾಯಿಗಳ ಪರಿಷ್ಕೃತ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ದ್ವಿತೀಯ ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಮಾಡುವ ಕಾರ್ಯಕ್ಕಾಗಿ ಬರೋಬ್ಬರಿ 30 ವರ್ಷಗಳ ದೀರ್ಘಾವಧಿಗೆ ಈ ಟೆಂಡರ್ ನೀಡಲಾಗಿದ್ದು, ವಾರ್ಷಿಕ ಶೇ.5 ರಷ್ಟು ಶುಲ್ಕ ಏರಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಹಣಕಾಸು ಇಲಾಖೆಯ ಎಚ್ಚರಿಕೆ ಕಡೆಗಣನೆ
ಒಬ್ಬರೇ ವೆಂಡರ್ಗೆ 30 ವರ್ಷಗಳ ಕಾಲ ಗುತ್ತಿಗೆ ನೀಡಿದರೆ, ಸರ್ಕಾರವು ಕೇವಲ ಅವರೊಬ್ಬರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿತ್ತು. ಅಲ್ಲದೆ, ವಾರ್ಷಿಕ ಶೇ.5 ರಷ್ಟು ದರ ಏರಿಕೆ ನೀಡಿದರೆ, 30 ವರ್ಷಗಳ ಅಂತ್ಯಕ್ಕೆ ಮೂಲ ದರವು ಪ್ರಸ್ತುತ ದರಕ್ಕಿಂತ ಶೇಕಡಾ 430% ರಷ್ಟು ಹೆಚ್ಚಾಗಲಿದೆ. ಹೀಗಾಗಿ ದರ ಏರಿಕೆಯನ್ನು ಶೇ. 2.5 ಕ್ಕೆ ಮಿತಿಗೊಳಿಸಬೇಕು ಎಂದು ಸಲಹೆ ನೀಡಿತ್ತು. ಆದರೆ, ಈ ಯಾವುದೇ ಎಚ್ಚರಿಕೆಗಳನ್ನು ಪರಿಗಣಿಸದೆ ಸರ್ಕಾರ ಗುತ್ತಿಗೆಗೆ ಅಸ್ತು ಎಂದಿದೆ.
ಕ್ಯಾಬಿನೆಟ್ನಲ್ಲಿ ದಿಢೀರ್ ಅನುಮೋದನೆ!
ಅಚ್ಚರಿಯೆಂದರೆ, ಮೇ 22, 2026 ರಂದು ನಡೆದ ಸಚಿವ ಸಂಪುಟ ಸಭೆಯ ಮುಖ್ಯ ಕಾರ್ಯಸೂಚಿಯಲ್ಲಿ ಈ ವಿಚಾರವೇ ಇರಲಿಲ್ಲ. ಸಭೆ ಮುಕ್ತಾಯಗೊಳ್ಳಲು ಕೆಲವೇ ನಿಮಿಷಗಳು ಬಾಕಿ ಇರುವಾಗ, ದಿಢೀರನೆ ಹೆಚ್ಚುವರಿ ಕಾರ್ಯಸೂಚಿಯಲ್ಲಿ (Additional Agenda) ಈ ವಿಷಯವನ್ನು ತಂದು ಒಪ್ಪಿಗೆ ಪಡೆಯಲಾಗಿದೆ. ಇದರಿಂದಾಗಿ ಬಹುತೇಕ ಸಚಿವರಿಗೂ ಈ ಬೃಹತ್ ಮೊತ್ತದ ಯೋಜನೆಯ ಪೂರ್ಣ ಮಾಹಿತಿ ಇಲ್ಲದಂತಾಗಿದೆ.
ಭೂಮಿಯೇ ಇಲ್ಲದೆ ಟೆಂಡರ್ ಫೈನಲ್
ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಬೇಕಾದ ಜಾಗವನ್ನು ಇನ್ನೂ ವಶಕ್ಕೆ ಪಡೆಯದೆ, ಭೂಮಿಯ ಲಭ್ಯತೆಯೇ ಇಲ್ಲದಿದ್ದರೂ ಟೆಂಡರ್ ಅಂತಿಮಗೊಳಿಸಿರುವುದು ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗಕ್ಕೆ ನೇರ ದಾರಿಯಾಗಿದೆ.
ಯತ್ನಾಳ್ ಪತ್ರಕ್ಕೂ ಡೋಂಟ್ ಕೇರ್
ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯ ಉತ್ತರ ಮತ್ತು ದಕ್ಷಿಣ ಪ್ಯಾಕೇಜ್ಗಳ ಟೆಂಡರ್ನಲ್ಲಿ ನಿರ್ದಿಷ್ಟ ಕಂಪನಿಯೊಂದಕ್ಕೆ (ಡೆಲ್ಲಿ ಎಂಎಸ್ಡಬ್ಲ್ಯೂ ಸೊಲ್ಯೂಷನ್ಸ್) ಅನುಕೂಲ ಮಾಡಿಕೊಡಲು ಟೆಂಡರ್ ಷರತ್ತುಗಳನ್ನೇ ಬದಲಾಯಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆರ್ಥಿಕ ಇಲಾಖೆಯು ಈ ಪತ್ರದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ಸಮಿತಿ ರಚಿಸುವಂತೆ ಸೂಚಿಸಿತ್ತು. ಆದರೆ, ಅದನ್ನೂ ಕಡೆಗಣಿಸಲಾಗಿದೆ.
ದಕ್ಷಿಣ ಪ್ಯಾಕೇಜ್ಗೆ ಶೇ. 19.43 ರಷ್ಟು ಹೆಚ್ಚುವರಿ ಪಾವತಿ
ಮೂರು ಬಾರಿ ಕರೆಯಲಾದ ಟೆಂಡರ್ ಪ್ರಕ್ರಿಯೆಯ ನಂತರ ಡೆಲ್ಲಿ ಎಂಎಸ್ಡಬ್ಲ್ಯೂ ಸೊಲ್ಯೂಷನ್ಸ್ ಸಂಸ್ಥೆಯು ಎಲ್-1 ಆಗಿ ಹೊರಹೊಮ್ಮಿತ್ತು. ಹಲವು ಸುತ್ತಿನ ದರ ಸಂಧಾನಗಳ ನಂತರ ಅಂತಿಮವಾಗಿ ಪ್ರತಿ ಟನ್ ತ್ಯಾಜ್ಯಕ್ಕೆ 2,151 ರೂ. ಟಿಪ್ಪಿಂಗ್ ಶುಲ್ಕ ನಿಗದಿಪಡಿಸಲಾಗಿದೆ. ಇದು ಟೆಂಡರ್ ಅಂದಾಜು ಮೊತ್ತಕ್ಕಿಂತ ಶೇ. 19.43 ರಷ್ಟು ಹೆಚ್ಚಾಗಿದೆ.
ಒಟ್ಟಾರೆಯಾಗಿ, ಯಾವುದೇ ಸೂಕ್ತ ಪರಿಶೀಲನೆ ಇಲ್ಲದೆ, ತಜ್ಞರ ಸಮಿತಿ ವರದಿಯನ್ನೂ ಕಾಯದೆ ಸಾವಿರಾರು ಕೋಟಿ ರೂಪಾಯಿಗಳ ಬಿಲ್ಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿರುವುದು ಇದೀಗ ಆಡಳಿತ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪೂರ್ಣ ವರಿಯನ್ನು the-file-in ನಲ್ಲಿ ಓದಿ
