ನವದೆಹಲಿ (ಸಂಭ್ರಮಪ್ರಭ.com): ಬಹುನಿರೀಕ್ಷಿತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಹಸಿರು ನಿಶಾನೆ ತೋರಿದೆ. ಶುಕ್ರವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸುಮಾರು 18 ಶಾಸಕರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡನೇ ಹಂತದ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಘಟ್ಟ ತಲುಪಿದ್ದು, ಸೋಮವಾರ ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದರು.
ಜಾತಿ, ಪ್ರಾದೇಶಿಕ ಸಮೀಕರಣಕ್ಕೆ ಮಣೆ
ಮೂಲಗಳ ಪ್ರಕಾರ, ರಾಜ್ಯ ನಾಯಕರುಗಳು ಸಲ್ಲಿಸಿದ್ದ ಸಂಭಾವ್ಯ ಪಟ್ಟಿಯಲ್ಲಿ ಹೈಕಮಾಂಡ್ 16 ರಿಂದ 18 ಹೆಸರುಗಳಿಗೆ ಒಪ್ಪಿಗೆ ಸೂಚಿಸಿದೆ. ನೂತನ ಸಂಪುಟದಲ್ಲಿ ಜಾತಿ, ಪ್ರಾದೇಶಿಕ ಮತ್ತು ಧಾರ್ಮಿಕ ಪ್ರಾತಿನಿಧ್ಯವನ್ನು ಕರಾರುವಕ್ಕಾಗಿ ಸರಿದೂಗಿಸುವ ನಿಟ್ಟಿನಲ್ಲಿ ಹಿರಿಯ ನಾಯಕರು ಹಾಗೂ ಮೊದಲ ಬಾರಿಗೆ ಸಚಿವರಾಗುತ್ತಿರುವ ಹೊಸಬರ ಸಮ್ಮಿಶ್ರಣ ಇರಲಿದೆ ಎನ್ನಲಾಗಿದೆ.
ಪಿಟಿಐ ಸುದ್ದಿ ಸಂಸ್ಥೆಯ ವರದಿಯಂತೆ, ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗಿನ ಜಾವದೊಳಗೆ ನೂತನ ಸಚಿವರ ಅಂತಿಮ ಪಟ್ಟಿಗೆ ಅಧಿಕೃತ ಮುದ್ರೆ ಬೀಳಲಿದ್ದು, ಸೋಮವಾರ ಸಂಜೆ ಪ್ರಮಾಣ ವಚನ ಸಮಾರಂಭ ಜರುಗುವುದು ಬಹುತೇಕ ನಿಶ್ಚಿತವಾಗಿದೆ. ವಾಸ್ತವವಾಗಿ ಶುಕ್ರವಾರವೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿತ್ತು. ಆದರೆ, ವರಿಷ್ಠರ ಮಟ್ಟದಲ್ಲಿ ಆಕಾಂಕ್ಷಿಗಳ ಕುರಿತು ಹೆಚ್ಚಿನ ಚರ್ಚೆ ಮತ್ತು ಸಮಾಲೋಚನೆಗಳ ಅಗತ್ಯವಿದ್ದ ಕಾರಣ ಪ್ರಕ್ರಿಯೆಯನ್ನು ಕೊಂಚ ವಿಳಂಬ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಒಳ ಮೀಸಲಾತಿ ಹಾಗೂ ಖಾಲಿ ಹುದ್ದೆಗಳ ಲೆಕ್ಕಾಚಾರ
ಸಂಪುಟದಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (OBC) ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಆದರೆ, ಕಿರಿಯ ಶಾಸಕರು, ಪ್ರಮುಖ ಸಮುದಾಯಗಳು ಹಾಗೂ ಈವರೆಗೆ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಗುಂಪುಗಳನ್ನೂ ಒಳಗೊಂಡಂತೆ ವಿಶಾಲವಾದ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಶಿವಕುಮಾರ್ ಪಟ್ಟು ಹಿಡಿದರು.
ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಚಿವರ ಆಯ್ಕೆ ನಡೆಯಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ವಾದಿಸಿದರು.
ಸಭೆಯ ಬಳಿಕ ರಾಜ್ಯ ನಾಯಕರಿಗೆ ಬೆಂಗಳೂರಿಗೆ ಮರಳುವಂತೆ ಸೂಚಿಸಿದ ರಾಹುಲ್ ಗಾಂಧಿ, ಭಾನುವಾರ ರಾತ್ರಿ ಅಂತಿಮ ಪಟ್ಟಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು. ಸೋಮವಾರವೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಸೂಕ್ತ ಎಂದು ಶಿವಕುಮಾರ್ ಒಲವು ತೋರಿದರು.
ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ, “ಚರ್ಚೆ ಸಕಾರಾತ್ಮಕವಾಗಿ ಅಂತ್ಯಗೊಂಡಿದ್ದು, ಸೋಮವಾರವೇ ಪ್ರಮಾಣ ವಚನ ನಡೆಯುವ ಸಾಧ್ಯತೆ ದಟ್ಟವಾಗಿದೆ” ಎಂದರು.
ಇತರ ನೇಮಕಾತಿಗಳ ಚರ್ಚೆ: ವಿಧಾನಸಭಾ ಸ್ಪೀಕರ್, ವಿಧಾನಪರಿಷತ್ ಸಭಾಪತಿ ಹಾಗೂ ಉಭಯ ಸದನಗಳ ಮುಖ್ಯ ಸಚೇತಕರ ನೇಮಕದ ಬಗ್ಗೆಯೂ ವರಿಷ್ಠರು ಸಮಾಲೋಚನೆ ನಡೆಸಿದರು. ಇದರ ಜೊತೆಗೆ, ವಿಧಾನ ಪರಿಷತ್ತಿನ ಐದು ನಾಮನಿರ್ದೇಶಿತ ಸ್ಥಾನಗಳ ಭರ್ತಿ ಬಗ್ಗೆಯೂ ಚರ್ಚೆ ನಡೆಯಿತು.
ಲಾಬಿ ತೀವ್ರ: ಮುಖ್ಯಮಂತ್ರಿ ಸೇರಿದಂತೆ ಕರ್ನಾಟಕ ಸಚಿವ ಸಂಪುಟವು ಗರಿಷ್ಠ 34 ಸದಸ್ಯರನ್ನು ಹೊಂದಿರಬಹುದು. ಪ್ರಸ್ತುತ ಕೇವಲ 14 ಸಚಿವರು ಮಾತ್ರ ಅಧಿಕಾರದಲ್ಲಿದ್ದು, ಇನ್ನೂ 20 ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳ ಭರ್ತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ, ಸಚಿವ ಸ್ಥಾನದ ಆಕಾಂಕ್ಷಿ ಕಾಂಗ್ರೆಸ್ ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದಾರೆ.
