ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ‘ನೀಟ್’ (NEET 2026) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ವೈಫಲ್ಯವನ್ನು ಖಂಡಿಸಿ ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಬೃಹತ್ ಪ್ರತಿಭಟನೆ ನಡೆಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
“ನಾವು ‘ಮೇಕ್ ಇನ್ ಇಂಡಿಯಾ’ ಕೇಳಿದ್ರೆ, ನೀವು ನಮಗೆ ‘ಲೀಕ್ ಇನ್ ಇಂಡಿಯಾ’ ಕೊಟ್ರಿ” ಎಂಬ ಆಕ್ರೋಶಭರಿತ ಘೋಷಣೆಗಳು ಜಂತರ್ ಮಂತರ್ನಲ್ಲಿ ಮೊಳಗಿದವು. ಕೈಯಲ್ಲಿ ಕಪ್ಪು ಭಿತ್ತಿಪತ್ರಗಳನ್ನು ಹಿಡಿದ ಸಾವಿರಾರು ಯುವಕರು ಎನ್ಟಿಎ (NTA) ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಏನಿದು ಕಾಕ್ರೋಚ್ ಪಾರ್ಟಿ?
ನೀಟ್ ಅಕ್ರಮ ಹಾಗೂ ಸಿಬಿಎಸ್ಇ ಆನ್ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿನ ಲೋಪಗಳನ್ನು ಕಟುವಾಗಿ ವಿರೋಧಿಸಲು ಯುವಜನರೇ ಸೇರಿ ಕಟ್ಟಿರುವ ವಿನೂತನ ಹಾಗೂ ವಿಡಂಬನಾತ್ಮಕ ಸಂಘಟನೆಯೇ ಈ ‘ಕಾಕ್ರೋಚ್ ಜನತಾ ಪಾರ್ಟಿ’.
ಈ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಲೆಂದೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಅಮೆರಿಕದ ಬೋಸ್ಟನ್ನಿಂದ ದೆಹಲಿಗೆ ಆಗಮಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆತ್ಮಕಥನ ಹಿಡಿದು ಕಾಣಿಸಿಕೊಂಡಿದ್ದ ಅವರು, ಅಲ್ಲಿಂದ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಯುವಕರ ದನಿಗೂಡಿಸಿದರು.
ಎಕ್ಸ್ನಲ್ಲಿ (X) ಟ್ರೆಂಡ್ ಆದ ಅಭಿಯಾನ
ಪ್ರತಿಭಟನೆಗೂ ಮುನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಈ ಸಂಘಟನೆ, “ಭಾರತದ ಸಂವಿಧಾನದ ಬೆಂಬಲದೊಂದಿಗೆ, ಕಾಕ್ರೋಚ್ಗಳು ಜಂತರ್ ಮಂತರ್ನಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಆರಂಭಿಸಲಿವೆ. ಕಾಕ್ರೋಚ್ಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಹೋಗುತ್ತಿದ್ದಾರೆ” ಎಂದು ಎಚ್ಚರಿಕೆ ನೀಡಿತ್ತು. ಯುವಕರ ಈ ವಿನೂತನ ಶೈಲಿಯ ಹೋರಾಟಕ್ಕೆ ದೆಹಲಿ ಪೊಲೀಸರು ಕೂಡ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಶಾಂತಿಯುತ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ನೀಡಿದ್ದರು.
ಮರುಪರೀಕ್ಷೆ ಘೋಷಣೆಯಾದರೂ ತಣ್ಣಗಾಗದ ಆಕ್ರೋಶ
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಆಡಳಿತಾತ್ಮಕ ವೈಫಲ್ಯಗಳ ಹಿನ್ನೆಲೆಯಲ್ಲಿ ಜೂನ್ 21 ರಂದು ಮರುಪರೀಕ್ಷೆ ನಡೆಸಲು ಈಗಾಗಲೇ ದಿನಾಂಕ ನಿಗದಿಯಾಗಿದೆ. ಸಿಬಿಐ ಕೂಡ ತನಿಖೆ ಚುರುಕುಗೊಳಿಸಿದ್ದು ಹಲವರನ್ನು ಬಂಧಿಸಿದೆ. ಆದರೆ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮೇಲೆಯೇ ನಂಬಿಕೆ ಕಳೆದುಕೊಂಡಿರುವ ವಿದ್ಯಾರ್ಥಿಗಳು, ಕೇವಲ ತನಿಖೆಯಲ್ಲ, ಬದಲಾಗಿ ಶಿಕ್ಷಣ ಸಚಿವಾಲಯದ ಉನ್ನತ ಮಟ್ಟದ ಹೊಣೆಗಾರಿಕೆ ನಿಗದಿಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
