ಬೆಂಗಳೂರು: ವಿದ್ಯುತ್ ಬಿಲ್ನ ದಂಡದ ಮೊತ್ತವನ್ನು ಕಡಿಮೆ ಮಾಡಿಕೊಡಲು ಬರೋಬ್ಬರಿ 15 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರಾಜಾಜಿನಗರ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಬಸವರಾಜಯ್ಯ ಬಂಧಿತ ಆರೋಪಿ.
ಎಲೆಕ್ಟ್ರಿಸಿಟಿ ಬಿಲ್ನಲ್ಲಿ ವಿಧಿಸಲಾಗಿದ್ದ ದಂಡದ ಮೊತ್ತವನ್ನು ಕಡಿತಗೊಳಿಸಿಕೊಡುವಂತೆ ಕೋರಿ ಬಂದಿದ್ದ ವ್ಯಕ್ತಿಯ ಬಳಿ ಆರೋಪಿ ಎಇಇ ಬಸವರಾಜಯ್ಯ ಅವರು ಆರಂಭದಲ್ಲಿ 18 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಮಾತುಕತೆ ನಡೆದು 15 ಲಕ್ಷ ರೂಪಾಯಿ ನೀಡಲು ಒಪ್ಪಂದವಾಗಿತ್ತು.
ಈ ಕುರಿತು ಸಲ್ಲಿಕೆಯಾದ ಖಚಿತ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ, ಆರೋಪಿ ಬಸವರಾಜಯ್ಯ ಅವರು ದೂರುದಾರರಿಂದ 15 ಲಕ್ಷ ರೂ. ಲಂಚ ಸ್ವೀಕರಿಸುವಾಗ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ತಕ್ಷಣವೇ ಆರೋಪಿ ಎಇಇ ಬಸವರಾಜಯ್ಯ ಅವರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ಅವರಿಂದ ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
