ಬೆಂಗಳೂರು: ರಾಜಕೀಯದಲ್ಲಿ ಪರಿಶ್ರಮ, ಲೆಕ್ಕಾಚಾರಗಳ ಜೊತೆಗೆ ಕೆಲವೊಮ್ಮೆ ‘ಅದೃಷ್ಟ’ ಕೂಡ ದೊಡ್ಡ ಪಾತ್ರ ವಹಿಸುತ್ತದೆ ಎಂಬುದಕ್ಕೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಒಂದು ಸರ್ಕಾರಿ ನಿವಾಸವೇ ದೊಡ್ಡ ಸಾಕ್ಷಿ. ಹೌದು, ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಈ ‘ಅದೃಷ್ಟದ ಮನೆ’ಯ ಕಥೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬುಧವಾರ ಡಿಕೆಶಿ ಪ್ರಮಾಣವಚನ: ಮುಖ್ಯಮಂತ್ರಿ ಹುದ್ದೆಗೇರಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ಬಹುಕಾಲದ ಕನಸು ನನಸಾಗುವ ಶುಭಗಳಿಗೆ ಹತ್ತಿರವಾಗಿದೆ. ಇದೇ ಬುಧವಾರ ಸಂಜೆ 4:05ಕ್ಕೆ ರಾಜ್ಯಪಾಲರ ಕಚೇರಿಯಲ್ಲಿ (ಲೋಕಭವನ) ಡಿ.ಕೆ. ಶಿವಕುಮಾರ್ ಅವರು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜಕಾರಣದಲ್ಲಿ ‘ಡಿಕೆಶಿ ಸರ್ಕಾರ್’ ಯುಗಾರಂಭವಾಗಲಿದೆ.
ಏನಿದು ‘ಅದೃಷ್ಟದ ಮನೆ’ಯ ರಹಸ್ಯ? ಕುಮಾರಕೃಪಾ ರಸ್ತೆಯಲ್ಲಿರುವ ಈ ಸರ್ಕಾರಿ ನಿವಾಸವು ಕೇವಲ ಒಂದು ಮನೆಯಲ್ಲ, ಬದಲಾಗಿ ಇದು ಹಲವು ನಾಯಕರ ರಾಜಕೀಯ ಏಳುಬೀಳುಗಳನ್ನು, ಕನಸುಗಳನ್ನು ಕಂಡಿರುವ ಐತಿಹಾಸಿಕ ಸಾಕ್ಷಿ. ಇಲ್ಲಿ ವಾಸ ಮಾಡಿದವರಿಗೆ ‘ಅಧಿಕಾರದ ಭಾಗ್ಯ’ ಒಲಿಯುತ್ತದೆ ಎಂಬ ಬಲವಾದ ನಂಬಿಕೆ ರಾಜಕೀಯ ವಲಯದಲ್ಲಿದೆ.
ಸಿದ್ದರಾಮಯ್ಯ ಅವರಿಗೂ ಒಲಿದಿದ್ದ ಅದೃಷ್ಟ: ಈ ನಂಬಿಕೆ ಹುಟ್ಟಲು ಪ್ರಮುಖ ಕಾರಣವೊಂದಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇದೇ ಮನೆಯಲ್ಲಿ ವಾಸವಿದ್ದರು. ಆ ಬಳಿಕ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಂದಿನಿಂದ ಈ ನಿವಾಸಕ್ಕೆ ‘ಅದೃಷ್ಟದ ಮನೆ’ ಎಂಬ ಹೆಸರು ಶಾಶ್ವತವಾಗಿ ಅಂಟಿಕೊಂಡಿತು ಹಾಗೂ ಈ ಮನೆಗಿರುವ ಆಕರ್ಷಣೆ ದುಪ್ಪಟ್ಟಾಯಿತು.
ಮನೆಗಾಗಿ ನಡೆದಿತ್ತು ಭಾರಿ ಪೈಪೋಟಿ: ಸಿದ್ದರಾಮಯ್ಯನವರ ಯಶಸ್ಸಿನ ಬಳಿಕ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಈ ಮನೆಗಾಗಿ ತೀವ್ರ ಪಟ್ಟು ಹಿಡಿದಿದ್ದರು. ಆದರೆ ಅಂತಿಮವಾಗಿ ಡಿ.ಕೆ. ಶಿವಕುಮಾರ್ ಅವರು ಈ ಮನೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಡಿ.ಕೆ. ಶಿವಕುಮಾರ್ ಕೂಡ ಇದೇ ಮನೆಯಲ್ಲಿ ವಾಸವಿದ್ದುಕೊಂಡೇ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರುವುದು ‘ಅದೃಷ್ಟದ ಮನೆ’ಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ. ಇದು ಕಾಕತಾಳೀಯವೋ ಅಥವಾ ನಿಜವಾದ ಅದೃಷ್ಟವೋ? ಏನೇ ಇದ್ದರೂ ಕುಮಾರಕೃಪಾ ರಸ್ತೆಯ ಈ ನಿವಾಸಕ್ಕಿರುವ ಆಕರ್ಷಣೆ ಹಾಗೂ ರಾಜಕೀಯ ಮಹತ್ವ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.
