ಐಎಎಸ್ ಬಡ್ತಿ ವಿವಾದ: ಅನರ್ಹ 7 ಅಧಿಕಾರಿಗಳ ಮುಂದುವರಿಕೆ ವಿರೋಧಿಸಿ 25 ಕೆಎಎಸ್ ಅಧಿಕಾರಿಗಳ ಬಂಡಾಯ, ಅಖಾಡಕ್ಕಿಳಿದ ಡಿಕೆಶಿ

0
9
kas-ias-promotion-controversy

ಬೆಂಗಳೂರು: ಕನಿಷ್ಠ 8 ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಲ್ಲಿ ಭಾರೀ ಬಿಕ್ಕಟ್ಟು ಸೃಷ್ಟಿಯಾಗಿದೆ. ಏಳು ಮಂದಿ ಅನರ್ಹ ಅಧಿಕಾರಿಗಳು ಇನ್ನೂ ಐಎಎಸ್ ವೃಂದದಲ್ಲಿ ಮುಂದುವರಿದಿರುವುದನ್ನು ವಿರೋಧಿಸಿ 2008 ಹಾಗೂ 2010ನೇ ಬ್ಯಾಚ್‌ನ 25 ಕೆಎಎಸ್ ಅಧಿಕಾರಿಗಳು ಬಂಡೆದ್ದಿದ್ದಾರೆ. ಈ ಗೊಂದಲದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಅಖಾಡಕ್ಕಿಳಿದಿದ್ದಾರೆ.

ಕೆಎಎಸ್ ವೃಂದದ ನಾಲ್ವರು ಅಧಿಕಾರಿಗಳಿಗೆ ಐಎಎಸ್ ಮುಂಬಡ್ತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಪಟ್ಟಿ ಸಿದ್ಧಪಡಿಸಿತ್ತು. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜಾತಿ ಅಧಿಕಾರಿಯೊಬ್ಬರಿಗೆ ವಿಶೇಷ ಮನ್ನಣೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಸಚಿವ ಸಂಪುಟದ ಮುಂದೆಯೂ ಚರ್ಚೆಗೆ ಬಂದಿದ್ದು, ವಿವಾದದ ಸ್ವರೂಪ ಅರಿತ ಸಂಪುಟವು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಸೂಚಿಸಿ, ನಿರ್ಣಯದಿಂದ ಹಿಂದೇಟು ಹಾಕಿದೆ.

ಈ ಬೆಳವಣಿಗೆಗಳ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೂರು ಪುಟಗಳ ಸುದೀರ್ಘ ಟಿಪ್ಪಣಿ ಬರೆದಿದ್ದು, ಕಾನೂನುಬಾಹಿರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಟಿಪ್ಪಣಿಯಲ್ಲಿ ಏನಿದೆ? ಇತ್ತೀಚೆಗೆ 25 ಕೆಎಎಸ್ ಅಧಿಕಾರಿಗಳು ಡಿಸಿಎಂ ಅವರನ್ನು ಖುದ್ದಾಗಿ ಭೇಟಿಯಾಗಿ, ಮುಂಬಡ್ತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ದೂರು ನೀಡಿದ್ದರು. ಅಖಿಲ ಭಾರತ ಸೇವೆಗಳು (ಬಡ್ತಿ ಮೂಲಕ ನೇಮಕಾತಿ) ನಿಯಮಾವಳಿ 1955ರ ಪ್ರಕಾರ, ಕಡ್ಡಾಯವಾಗಿ 8 ವರ್ಷಗಳ ಸೇವೆ ಸಲ್ಲಿಸದಿದ್ದರೂ ಕೇವಲ ‘ಕಾಲ್ಪನಿಕ ಜೇಷ್ಠತೆ’ (Notional Seniority) ಆಧಾರದ ಮೇಲೆ ಕೆಲವರಿಗೆ ಐಎಎಸ್ ಹುದ್ದೆಗೆ ಪದನ್ನೋತಿ ನೀಡಲು ಯತ್ನಿಸಲಾಗುತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಕೆಎಎಸ್ ಕಿರಿಯ ಶ್ರೇಣಿಗೆ ನೇರ ನೇಮಕಾತಿಯ ಮೂಲಕ ಬಂದು ಸತತ 14 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ವಿಳಂಬ ಮಾಡಲಾಗುತ್ತಿದೆ. ಆದರೆ ನಿಯಮಾನುಸಾರ ಕನಿಷ್ಠ ಸೇವೆ ಸಲ್ಲಿಸದವರಿಗೆ ಬಡ್ತಿ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಎಲ್ಲ ಇಲಾಖೆಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿಗೆ ತರುವಂತೆ ಡಿಸಿಎಂ ಸೂಚಿಸಿದ್ದಾರೆ.

7 ಅನರ್ಹರು ಇನ್ನೂ ಐಎಎಸ್ ವೃಂದದಲ್ಲಿ! ಇದೇ ವೇಳೆ, 1998 ಮತ್ತು 1999ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕೆಎಟಿ (KAT) ನೀಡಿದ ಸ್ಪಷ್ಟ ಆದೇಶಗಳಿದ್ದರೂ, 7 ಮಂದಿ ಅನರ್ಹ ಅಧಿಕಾರಿಗಳು ಈಗಲೂ ಐಎಎಸ್ ವೃಂದದಲ್ಲೇ ಮುಂದುವರಿದಿರುವ ಗಂಭೀರ ವಿಚಾರವನ್ನು ಡಿಸಿಎಂ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ.

ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಡಾಯ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿರುವ ಅಧಿಕಾರಿಗಳಿಗೆ ಬಡ್ತಿ ನೀಡುವಾಗ ಎದುರಾಗಿರುವ ಕಾನೂನಾತ್ಮಕ ಗೊಂದಲಗಳನ್ನು ತ್ವರಿತವಾಗಿ ಬಗೆಹರಿಸಿ, ಅರ್ಹ ಅಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಡಿ.ಕೆ. ಶಿವಕುಮಾರ್ ತಮ್ಮ ಟಿಪ್ಪಣಿಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಮಾಹಿತಿ ಕೃಪೆ: thefile.in

sambrama prabha editor suresh kt

LEAVE A REPLY

Please enter your comment!
Please enter your name here