ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಹಾಗೂ ಕೋಮು ಗಲಭೆಯಲ್ಲಿ ಭಾಗಿಯಾದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅಪ್ಪಟ “ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣ” ಎಂದು ಅವರು ಕಿಡಿಕಾರಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಈ ಸರ್ಕಾರವನ್ನು ಸರ್ಫ್ ಅಥವಾ ಡೆಟಾಲ್ ಹಾಕಿ ತೊಳೆದರೂ ಇವರ ಬುದ್ಧಿ ಬದಲಾಗುವುದಿಲ್ಲ. ಕೇಂದ್ರ ಸಚಿವರ ಕಚೇರಿ, ಸಾರ್ವಜನಿಕರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ, ದರ್ಗಾ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಿದ ಕ್ರಿಮಿನಲ್ಗಳ ಮೇಲಿನ ಕೇಸ್ಗಳನ್ನು ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ” ಎಂದು ಗುಡುಗಿದ್ದಾರೆ.
ಪಿಎಫ್ಐ ಕೇಸ್ ಮತ್ತು ಕುಕ್ಕರ್ ಬ್ಲಾಸ್ಟ್ ಉಲ್ಲೇಖ:
ಸರ್ಕಾರದ ಈ ನಿರ್ಧಾರವನ್ನು ಹಿಂದಿನ ಪಿಎಫ್ಐ (PFI) ಪ್ರಕರಣಗಳಿಗೆ ಹೋಲಿಸಿದ ಆರ್. ಅಶೋಕ್, “ಹಿಂದೆ ಇದೇ ರೀತಿ 150ಕ್ಕೂ ಹೆಚ್ಚು ಜನರ ಮೇಲಿದ್ದ ಕೇಸ್ಗಳನ್ನು ವಾಪಸ್ ಪಡೆಯಲಾಗಿತ್ತು. ಅದರ ಪರಿಣಾಮವಾಗಿಯೇ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ನಡೆಯಿತು. ಈಗ ಮತ್ತೆ ವೋಟ್ ಬ್ಯಾಂಕ್ಗಾಗಿ, ಪೊಲೀಸರ ಮೇಲೆ ಹಲ್ಲೆ ಮಾಡಿದರೂ ನಾವು ನಿಮ್ಮ ಪರವಾಗಿರುತ್ತೇವೆ ಎಂಬ ತಪ್ಪು ಸಂದೇಶವನ್ನು ಸರ್ಕಾರ ನೀಡುತ್ತಿದೆ. ಇದು ಸಂಪೂರ್ಣ ಸಂವಿಧಾನ ವಿರೋಧಿ ನಡೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಂಪರ್ ಬಹುಮಾನ’ ನೀಡುತ್ತಿರುವ ಸರ್ಕಾರ:
“ರೈತರು ಹಾಗೂ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆದರೆ ನಮ್ಮದೇನೂ ವಿರೋಧವಿಲ್ಲ. ಏಕೆಂದರೆ ಅವರು ಜನರಿಗಾಗಿ, ನಾಡಿಗಾಗಿ ಹೋರಾಟ ಮಾಡಿದ್ದಾರೆ. ಆದರೆ, ಸಮಾಜದ ಸ್ವಾಸ್ಥ್ಯ ಕದಡುವವರಿಗೆ ಯಾಕೆ ಬೆಂಬಲ?” ಎಂದು ಪ್ರಶ್ನಿಸಿದ ಅವರು, ದಾವಣಗೆರೆಯಲ್ಲಿ ಅನುದಾನ, ಹಿಜಾಬ್ ಆದೇಶ ವಾಪಸ್ ಮತ್ತು ಈಗ ಕಲ್ಬುರ್ಗಿ ಘಟನೆಯ ಕೇಸ್ ವಾಪಸ್ – ಹೀಗೆ ಸಾಲು ಸಾಲಾಗಿ ಒಂದು ನಿರ್ದಿಷ್ಟ ವರ್ಗಕ್ಕೆ ಬಂಪರ್ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದ ಭದ್ರತೆಗೆ ಇಂತಹ ಕ್ರಮಗಳು ಅತ್ಯಂತ ಅಪಾಯಕಾರಿ. ಕೂಡಲೇ ಸರ್ಕಾರ ತನ್ನ ಈ ವಿವಾದಾತ್ಮಕ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.



