ಮಂಡ್ಯ: ಗಣೇಶೋತ್ಸವದ ಸಂಭ್ರಮದ ನಡುವೆ ನಡೆದ ಬೃಹತ್ ಗಣಪತಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರ ತಲೆಗೆ ಪೆಟ್ಟು ಬಿದ್ದಿರುವ ಅವಘಡ ಮಂಡ್ಯ ನಗರದ ಮರಿಗೌಡ ಬಡಾವಣಿಯಲ್ಲಿ ನಡೆದಿದೆ.
ನಿನ್ನೆ ಮರಿಗೌಡ ಬಡಾವಣಿಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬೃಹತ್ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ಗಣಿಗ ರವಿಕುಮಾರ್ ಅವರು ಗಣಪತಿ ಮೂರ್ತಿಯನ್ನು ಮುಚ್ಚಿದ್ದ ಪರದೆಯನ್ನು ತೆರೆದು ಅನಾವರಣ ಮಾಡಲು ಮುಂದಾಗಿದ್ದಾರೆ. ಪರದೆಯನ್ನು ಎಳೆಯುತ್ತಿದ್ದಂತೆಯೇ ಮೇಲಿದ್ದ ಕೊಂಡಿ ಕಳಚಿ ನೇರವಾಗಿ ಶಾಸಕರ ತಲೆಯ ಮೇಲೆ ಬಿದ್ದಿದೆ.
ಘಟನೆಯಿಂದಾಗಿ ಶಾಸಕರ ತಲೆಗೆ ಗಾಯವಾಗಿದ್ದು, ತಕ್ಷಣವೇ ಎಚ್ಚೆತ್ತ ಬೆಂಬಲಿಗರು ಹಾಗೂ ಸ್ಥಳೀಯ ಮುಖಂಡರು ಅವರನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಶಾಸಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಕಾರ್ಯಕರ್ತರು ಹಾಗೂ ಜನರಿಗೆ ಈ ದಿಢೀರ್ ಘಟನೆ ಕೆಲಕಾಲ ಆತಂಕ ತಂದೊಡ್ಡಿತ್ತು.


