ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ಕಾಂಗ್ರೆಸ್ನ ಎಸ್ಟಿ ವರ್ಗದ ಪ್ರಬಲ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿ ಸುಮಾರು 15ಕ್ಕೂ ಹೆಚ್ಚು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ದಾಳಿಯನ್ನು ಕೇವಲ ತಾಂತ್ರಿಕವಾಗಿ ನೋಡುವುದಕ್ಕಿಂತ, ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಪಾಲಿಗೆ ದೊಡ್ಡ ಆತಂಕವಾಗಲಿದ್ದಾರೆಯೇ ಎಂಬ ಪ್ರಶ್ನೆಗಳು ಇದೀಗ ಮೂಡುತ್ತಿವೆ.
ಬಿಜೆಪಿಗೆ 14 ಎಸ್ಟಿ ಕ್ಷೇತ್ರಗಳ ಸೋಲಿನ ಭೀತಿ
ಸತೀಶ್ ಜಾರಕಿಹೊಳಿ ಅವರು ಎಸ್ಟಿ ವರ್ಗದ ಪ್ರಬಲ ನಾಯಕರಾಗಿದ್ದು, ಕಾಂಗ್ರೆಸ್ನ ಎಸ್ಟಿ ಶಾಸಕರ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್ಟಿ ವರ್ಗದ 14 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ; 14ಕ್ಕೆ 14 ಅಭ್ಯರ್ಥಿಗಳು ಸೋಲು ಕಂಡಿದ್ದರು. ಈ ಎಸ್ಟಿ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಲು ಮತ್ತು ಹೆಚ್ಚು ಸ್ಥಾನ ಗೆಲ್ಲಲು ಸತೀಶ್ ಜಾರಕಿಹೊಳಿ ಅವರೇ ಪ್ರಮುಖ ಕಾರಣ. ಜಾರಕಿಹೊಳಿ ಅವರು ಈ ವರ್ಗದ ಮೇಲೆ ಹೊಂದಿರುವ ಪ್ರಾಬಲ್ಯವೇ ಬಿಜೆಪಿಗೆ ಆತಂಕ ತಂದಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.
ಅಹಿಂದ ನಾಯಕತ್ವದ ಶೂನ್ಯ ತುಂಬುವ ಯತ್ನ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕ್ರಿಯ ರಾಜಕಾರಣದಲ್ಲಿದ್ದರೂ ಚುನಾವಣಾ ರಾಜಕಾರಣದಿಂದ ದೂರವಾಗುತ್ತಿದ್ದಾರೆ. ಇದರಿಂದ ಅಹಿಂದ ವರ್ಗದ ಮುಂದಿನ ನಾಯಕ ಯಾರು, ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಂದಾಗ ಸತೀಶ್ ಜಾರಕಿಹೊಳಿ ಅವರ ಹೆಸರು ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಅಹಿಂದ ವರ್ಗದ ನಾಯಕತ್ವದಲ್ಲಿ ಸೃಷ್ಟಿಯಾಗುತ್ತಿರುವ ಶೂನ್ಯವನ್ನು (ವ್ಯಾಕ್ಯೂಮ್) ತುಂಬಲು ಮತ್ತು ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಒಗ್ಗೂಡಿಸಲು ಸತೀಶ್ ಜಾರಕಿಹೊಳಿ ತೆರೆಮರೆಯಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದ್ದರು. ಅವರು ದೊಡ್ಡಮಟ್ಟದ ಅಹಿಂದ ನಾಯಕನಾಗಿ ಹೊರಹೊಮ್ಮಿದರೆ, ದೊಡ್ಡ ಮತಬ್ಯಾಂಕ್ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಪಾಲಾಗುವ ಆತಂಕ ಬಿಜೆಪಿಯಲ್ಲಿದೆ.
ಎಸ್ಟಿ ನಾಯಕರೇ ಇ.ಡಿ ಟಾರ್ಗೆಟ್: ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ
ಈ ಇ.ಡಿ ದಾಳಿಯ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. “ಇ.ಡಿ ಕೇವಲ ಎಸ್ಟಿ ವರ್ಗದ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ಮೊದಲು ಎಸ್ಟಿ ವರ್ಗದ ಬಿ. ನಾಗೇಂದ್ರ ಅವರ ಮೇಲೆ ದಾಳಿಯಾಯಿತು, ಈಗ ಮತ್ತೋರ್ವ ಎಸ್ಟಿ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಮೇಲೆ ದಾಳಿಯಾಗಿದೆ” ಎಂದು ಅವರು ದೂರಿದ್ದಾರೆ.
ಒಟ್ಟಾರೆಯಾಗಿ, ಮುಂದಿನ ದಿನಗಳಲ್ಲಿ ಅಹಿಂದ ಮತಬ್ಯಾಂಕ್ ಒಗ್ಗೂಡಬಾರದು, ಅದು ಚಿದ್ರವಾಗಿಯೇ ಉಳಿಯಬೇಕು ಹಾಗೂ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಮುನ್ನೆಲೆಗೆ ಬರಬಾರದು ಎಂಬ ತೆರೆಮರೆಯ ತಂತ್ರಗಾರಿಕೆಯ ಭಾಗವಾಗಿಯೇ ಅವರನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
