Updated By: Priyalachhi

ಬೆಂಗಳೂರು: ಕಾಲ್ತುಳಿತ ದುರಂತ ಸಂಭವಿಸಿದ ಏಳು ತಿಂಗಳ ಬಳಿಕ ಆರ್​​ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಾವಳಿ ಆಯೋಜನೆಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಈ ಬಾರಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯುವುದರ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ನಿವೃತ್ತ ನ್ಯಾ.ಮೈಕಲ್ ಡಿ ಕುನ್ಹಾ ನೀಡಿದ ಶಿಫಾರಸ್ಸುಗಳನ್ನ ಪಾಲಿಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಭರವಸೆ ನೀಡಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಆರ್​ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್ ಅವರು ಛತ್ತೀಸ್​​ಘಡದ ರಾಯಪುರ ಕ್ರೀಡಾಂಗಣದಲ್ಲಿ ಆರ್​​ಸಿಬಿಯ ಎರಡು ಪಂದ್ಯಗಳು ಹಾಗೂ ನವ ಮುಂಬೈಯಲ್ಲಿ ಇನ್ನುಳಿದ ಪಂದ್ಯಗಳ ಆಯೋಜನೆಗೆ ಒಲವು ತೋರಿದ್ದರು. ಈ ಬೆಳವಣಿಗೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ನಡೆಯುವುದು ಬಹುತೇಕ ಅನುಮಾನವಾಗಿತ್ತು.

ಏತ್ಮನಧ್ಯೆ ಆರ್​ಸಿಬಿ ಆಡಳಿತ ಮಂಡಳಿ ಜೊತೆ ಕೆಎಸ್​ಸಿಎ ನಡೆಸಿದ ಸಭೆ ಫಲಪ್ರದವಾಗಿತ್ತು. ಮಾತುಕತೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಎಐ ಕ್ಯಾಮರಾ ಅಳವಡಿಸಲು 3 ಕೋಟಿ ನೀಡುವುದಾಗಿ ಆರ್​ಸಿಬಿ ಘೋಷಿಸಿತ್ತು. ಮತ್ತೊಂದೆಡೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ವಿಧಿಸಲಾಗಿರುವ ನಿಯಮಗಳನ್ನು ಪಾಲಿಸುವುದಾಗಿ ಲಿಖಿತ ಭರವಸೆ ನೀಡಿತ್ತು.

ಸುರಕ್ಷತೆ, ಭದ್ರತೆ ಹಾಗೂ ಜನಸಂದಣಿ ನಿಯಂತ್ರಿಸಲು ವಿಧಿಸಲಾಗಿರುವ ನಿಯಮಗಳು ಹಾಗೂ ಶಿಫಾರಸ್ಸುಗಳನ್ನ ಅನುಷ್ಠಾನ ಮಾಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರ ಪಂದ್ಯ ಆಯೋಜನೆಗೆ ಹಸಿರು ನಿಶಾನೆ ತೋರಿದೆ ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version