Updated By: Priyalachhi

ಮೈಸೂರು: ಬಹುನಿರೀಕ್ಷಿತ ಮೈಸೂರು-ಬೆಳಗೊಳ-ಕುಶಾಲನಗರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ತಡೆ ಹಿಡಿದಿದೆ.

ಮೈಸೂರು-ಬೆಳಗೊಳ-ಕುಶಾಲನಗರ ನಡುವಿನ 87.2 ಕಿ.ಮೀ ಉದ್ದದ ಹೊಸ ರೈಲು ಮಾರ್ಗ ಯೋಜನೆಯು ಅನುಮೋದನೆಗೊಂಡ 7 ವರ್ಷಗಳ ಬಳಿಕ ತಡೆಹಿಡಿಯಲಾಗಿದೆ. ನಿರೀಕ್ಷಿತ ಪ್ರಯಾಣಿಕರು ಹಾಗೂ ಆದಾಯ ಕಡಿಮೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವಾಲಯವು 2019ರ ಫೆಬ್ರವರಿ 27ರಂದು ಈ ಯೋಜನೆಗೆ ಅನುಮೋದನೆ ನೀಡಿ, 1,854.62 ಕೋಟಿ ರೂ. ಅಂದಾಜು ಮೊತ್ತವನ್ನು ಬಿಡುಗಡೆ ಮಾಡಿತ್ತು. ಅಲ್ಲದೆ, 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗಾಗಿ ಸಾವಿರ ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ನಡುವೆ 2020ರ ಅಕ್ಟೋಬರ್‌ನಲ್ಲಿ ನೈಋತ್ಯ ರೈಲ್ವೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ, ಮೈಸೂರು-ಬೆಳಗೊಳ-ಕುಶಾಲನಗರ ನಡುವೆ ಹೊಸ ರೈಲ್ವೆ ಬ್ರಾಡ್ ಗೇಜ್ ಮಾರ್ಗಕ್ಕೆ ಅಂತಿಮ ಸ್ಥಳದ ಸಮೀಕ್ಷೆಗೆ ಆದೇಶ ನೀಡಿದ್ದರು.

ಅನಂತರ 1.26 ಕೋಟಿ ರೂ. ವೆಚ್ಚದಲ್ಲಿ ಅಂತಿಮ ಸ್ಥಳ ಸಮೀಕ್ಷೆಯ ಗುತ್ತಿಗೆಯನ್ನು ಬೆಂಗಳೂರು ಮೂಲದ ಸಂಸ್ಥೆಗೆ 2021ರ ಆಗಸ್ಟ್‌ನಲ್ಲಿ ವಹಿಸಲಾಗಿತ್ತು. ಇದಾದ ಬಳಿಕ ಭೂಸ್ವಾಧೀನ, ರೈಲು ಹಳಿ ಜೋಡಣೆ, ಮ್ಯಾಪಿಂಗ್, ಅಂತಿಮ ಭೂ ಸಮತಟ್ಟು ಸಮೀಕ್ಷೆ ಸೇರಿದಂತೆ ಯೋಜನೆ ಸಂಬಂಧಿತ ಹಲವು ಪ್ರಕ್ರಿಯೆಗಳು ಆರಂಭಗೊಂಡಿದ್ದವು.

ಈ ಪ್ರಸ್ತಾವಿತ ರೈಲು ಮಾರ್ಗವು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದಿಂದ ಆರಂಭವಾಗಿ, ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಅಂತ್ಯಗೊಳ್ಳಬೇಕಾಗಿತ್ತು. ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು, ಸತ್ತೆಗಾಲ, ಪಿರಿಯಾಪಟ್ಟಣ ಹಾಗೂ ದೊಡ್ಡಹೊನ್ನೂರು ಮಾರ್ಗವಾಗಿ ಈ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು.

ಪರಿಷ್ಕೃತ ಯೋಜನೆಗೂ ಗ್ರಹಣ: ಮಡಿಕೇರಿವರೆಗೆ ರೈಲು ಮಾರ್ಗ ವಿಸ್ತರಿಸಬೇಕೆಂಬ ಶತಮಾನದ ಬಹುನಿರೀಕ್ಷೆಯೊಂದಿಗೆ ಈ ಮಹತ್ವದ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಹಿಂದಿನ ರೈಲ್ವೆ ಸಮೀಕ್ಷೆಯಲ್ಲಿ ಆರ್ಥಿಕವಾಗಿ ಅನುಕೂಲಕರವಲ್ಲ ಎಂಬ ಕಾರಣದಿಂದ ಯೋಜನೆಯನ್ನು ಕೈಬಿಡಲಾಗಿತ್ತು. ಅಲ್ಲದೆ, ಕಾವೇರಿ ನದಿಯ ಸ್ವಾಭಾವಿಕ ಹರಿವಿಗೆ ರೈಲ್ವೆ ಯೋಜನೆ ಅಡ್ಡಿಯಾಗುತ್ತದೆ ಎಂದು ಪರಿಸರವಾದಿಗಳೂ ತೀವ್ರವಾಗಿ ವಿರೋಧಿಸಿದ್ದರು. ನಂತರ ಪರಿಷ್ಕೃತಗೊಂಡ ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ, ರೈಲುಗಳ ಮಿತ ಸಂಚಾರ ಹಾಗೂ ಲಾಭದಾಯಕವಲ್ಲ ಎಂಬ ಕಾರಣದಿಂದ ರೈಲ್ವೆ ಸಚಿವಾಲಯವೇ ತಡೆ ಹಿಡಿದಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version