Updated By: Priyalachhi

ಬೆಂಗಳೂರು: ಕೊಲೆ, ರಾಬರಿ, ಡಕಾಯಿತಿ, ಅತ್ಯಾಚಾರ ಸೇರಿದಂತೆ ಪ್ರಮುಖ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ತುಸು ಕಡಿಮೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅಲ್ಲದೆ, ಕೋಮುಗಲಭೆ ಹಾಗೂ ಗ್ಯಾಂಗ್ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರು ಕೈಗೊಂಡ ಬಿಗಿ ಕ್ರಮಗಳಿಂದ ಅಪರಾಧಗಳಿಗೆ ಬ್ರೇಕ್ ಹಾಕಿದ್ದಾರೆ.

ಪೊಕ್ಸೊ, ಅತ್ಯಾಚಾರ, ಹಲ್ಲೆ, ಎನ್​ಡಿಪಿಎಸ್, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ವಂಚನೆ, ರಾಬರಿ, ಡಕಾಯಿತಿ ಹಾಗೂ ಗಲಭೆ ಸೇರಿದಂತೆ ರಾಜ್ಯದಲ್ಲಿ 2024ರಲ್ಲಿ 29,159 ಪ್ರಕರಣ ದಾಖಲಾಗಿದ್ದರೆ, ಈ ವರ್ಷ ಡಿಸೆಂಬರ್​ (15ರ ವರೆಗೆ) ಅಂತ್ಯಕ್ಕೆ 27,159 ಪ್ರಕರಣಗಳು ದಾಖಲಾಗಿವೆ. ಕೊಲೆ, ರಾಬರಿ, ಡಕಾಯಿತಿ ಹಾಗೂ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಈ ವರ್ಷ ಗಮನಾರ್ಹ ಇಳಿಕೆಯಾಗಿದೆ.

ಡ್ರಗ್ಸ್ ವಿರುದ್ಧ ಸಮರ ಸಾರಿರುವ ರಾಜ್ಯ ಪೊಲೀಸರು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ದಂಧೆಯಲ್ಲಿ ತೊಡಗಿಸಿಕೊಂಡಿದ್ದವರನ್ನು ಹಡೆಮುರಿ ಕಟ್ಟಿರುವುದಾಗಿ ಗೃಹ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆ: ರಾಜ್ಯದಲ್ಲಿ ಅತ್ಯಾಚಾರ ಹಾಗೂ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ತಹಬದಿಗೆ ಬಂದಿವೆ. ಪೊಲೀಸ್ ಇಲಾಖೆಯು ಕೈಗೊಂಡ ಕ್ರಮಗಳು ಪ್ರಕರಣ ಸಂಖ್ಯೆ ಇಳಿಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಕರ್ನಾಟಕ ಸ್ಟೇಟ್​ ಪೊಲೀಸ್​ ಆ್ಯಪ್ ಹಾಗೂ ವೆಬ್​ಸೈಟ್​ನಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಸುರಕ್ಷಾ ಆ್ಯಪ್​ನಲ್ಲಿ ಮಹಿಳೆಯರು ತುರ್ತು ಸಂದರ್ಭಗಳಲ್ಲಿ ಸೇಫ್ ಕನೆಕ್ಟ್ ಮೂಲಕ ದೂರು ನೀಡುವ ವ್ಯವಸ್ಥೆ, ಇಆರ್ ಎಸ್ ಎಸ್ ಸಹಾಯವಾಣಿ ಮೂಲಕ ಹೊಯ್ಸಳ ಗಸ್ತು ವಾಹನಗಳ ಗಸ್ತು ಹೆಚ್ಚಳ, ನಗರದಲ್ಲಿರುವ 241 ಹೊಯ್ಸಳ ಮೂಲಕ ತುರ್ತು ಸ್ಪಂದನೆ, ಜನಸಂದಣಿ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 50 ಸೇಫ್ಟಿ ಐಲ್ಯಾಂಡ್ ಸ್ಥಾಪನೆ ಪರಿಣಾಮದಿಂದಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version