ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ವಿಸ್ತೃತ ಜಾಲದ ಮೂಲಕ (ಸಿಂಡಿಕೇಟ್) ಕಾರ್ಯ ನಿರ್ವಹಿಸುತ್ತಿದೆ’ ಎಂಬ ಕೇಂದ್ರೀಯ ಕಸ್ಟಮ್ಸ್ ಪ್ರತಿಪಾದನೆಯನ್ನು ಹೈಕೋರ್ಟ್ ಪ್ರಮುಖವಾಗಿ ಉಲ್ಲೇಖಿಸಿದೆ.
2 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ಆರೋಪಿಯೊಬ್ಬರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದ ಕ್ರಿಮಿನಲ್ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ಚಟುವಟಿಕೆಗಳು ರಾಷ್ಟ್ರದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ’ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಕೇಂದ್ರೀಯ ಕಸ್ಟಮ್ಸ್ ಪರ ವಕೀಲ ಮಧು ಎನ್.ರಾವ್, ‘ಅರ್ಜಿದಾರರು ದಂಧೆಯ ಮೊದಲ ಕೊಂಡಿಯೋ, ಮಧ್ಯವೋ ಅಥವಾ ದೊಡ್ಡ ಸಿಂಡಿಕೇಟ್ನ ಸಣ್ಣ ಕೊಂಡಿಯೋ ಎಂಬುದನ್ನು ತನಿಖೆಯಲ್ಲೇ ನಿಖರವಾಗಿ ಶೋಧಿಸಬೇಕಿದೆ. ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಕಸ್ಟಮ್ಸ್ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ’ ಎಂದು ವಿವರಿಸಿದ್ದರು.
‘ಜಾಲದಲ್ಲಿ ಪರದೆಯ ಹಿಂದೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಗುರುತು, ಚಿನ್ನದ ಮೂಲ, ಅದನ್ನು ಹೊತ್ತು ತಂದು ವಿಮಾನದಲ್ಲಿ ಬಿಟ್ಟ ಪ್ರಯಾಣಿಕ, ಅದರ ಸ್ಥಳವನ್ನು ತಿಳಿಸಿದ ವ್ಯಕ್ತಿಗಳು, ಅದನ್ನು ಮರಳಿ ಪಡೆದು ಶುಚಿಗೊಳಿಸುವ ಸಿಬ್ಬಂದಿ ಮತ್ತು ಅಂತಿಮವಾಗಿ ಅದನ್ನು ಸ್ವೀಕರಿಸಬೇಕಾದ ವ್ಯಕ್ತಿಗಳು… ಹೀಗೆ ಇದರ ಎಲ್ಲ ಕೊಂಡಿಗಳು ಎಲ್ಲಿವೆ ಎಂಬುದನ್ನು ಪತ್ತೆ ಮಾಡಬೇಕಿದೆ. ವಿಮಾನದಲ್ಲಿ ಚಿನ್ನ ಅಥವಾ ನಿಷೇಧಿತ ವಸ್ತುಗಳ ಕಳ್ಳಸಾಗಣೆಯ ಜಾಲದ ಕಾರ್ಯ ವೈಖರಿಯ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ. ಆದ್ದರಿಂದ, ಅರ್ಜಿ ವಜಾ ಮಾಡಬೇಕು’ ಎಂದು ಕೋರಿದ್ದರು.
ಕಸ್ಟಮ್ಸ್ ಕೋರಿಕೆಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಪ್ರಕರಣದ ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿದೆ. ಅರ್ಜಿದಾರರು ಆಪಾದಿತ ವಹಿವಾಟಿನಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸಾಬೀತುಪಡಿಸಲು ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ. ಹಾಗಾಗಿ, ವಿಚಾರಣೆಯನ್ನು ತಡೆದರೆ ಪ್ರಾರಂಭದಲ್ಲಿಯೇ ಶಾಸನಬದ್ಧ ಪ್ರಕ್ರಿಯೆಯ ಕತ್ತು ಹಿಸುಕಿದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಇಂತಹ ಗಹನವಾದ ಪ್ರಕರಣಗಳಲ್ಲಿ ಹೈಕೋರ್ಟ್ ತನ್ನ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಿಕೊಂಡು ವಿಚಾರಣೆ ರದ್ದುಗೊಳಿಸುವುದು ಸಹನೀಯವಲ್ಲ. ಆರೋಪಗಳು ಆಳವಾದ ಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳುತ್ತಿರುವ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಸೌದಿಯಿಂದ ಬಂದ 2 ಕೆ.ಜಿ. ಗಟ್ಟಿ
ಕಸ್ಟಮ್ಸ್ ದೂರು: ‘ಅರ್ಜಿದಾರ ಎನ್.ನಂದೀಶ (33) ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ನಿವಾಸಿ. ಇವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನಗಳ ಕ್ಯಾಬಿನ್ ಕೇರ್ ಸಹಾಯಕನಾಗಿ ಕೆಲಸ ಮಾಡುತ್ತಿರುವ; ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಶುಚಿ ಸಿಬ್ಬಂದಿ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಸೌದಿ ಏರ್ಲೈನ್ಸ್ ವಿಮಾನವೊಂದು (ಎಸ್ವಿ–866) 2025ರ ಜೂನ್ 29ರಂದು ಜೆಡ್ಡಾ, ಸೌದಿ ಅರೇಬಿಯಾ ಮುಖಾಂತರ ಬೆಂಗಳೂರಿನ ಕೆಐಎಗೆ ಬಂದಿಳಿದಿತ್ತು. ಅಂದು ನಂದೀಶ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ಶುಚಿಗೊಳಿಸಿದ್ದರು. ವಿಮಾನದ ಸೀಟಿನ ಸಂಖ್ಯೆ 39ಎ ನಲ್ಲಿ ಅವರಿಗೆ ಎರಡು ಕೆ.ಜಿ ತೂಕದ ಚಿನ್ನದ ಬಾರ್ಗಳು ಮುಚ್ಚಿದ ಪ್ಯಾಕೆಟ್ನಲ್ಲಿ ಲಭ್ಯವಾಗಿದ್ದವು ಅಥವಾ ಅವುಗಳನ್ನು ಅವರು ಅಲ್ಲಿಂದ ತಮ್ಮ ಬಳಿ ಇರಿಸಿಕೊಂಡಿದ್ದರು. ನಂತರ ಕಸದ ಜತೆಗೆ ಹಾಕಿ, ಕಸ ಸಾಗಿಸುವ ವಾಹನದಲ್ಲಿ ಅದನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆದಿತ್ತು’ ಎಂಬುದು ಕಸ್ಟಮ್ಸ್ ಆರೋಪ.
ಆರೋಪಿ ನಂದೀಶ ಅವರ ವಿರುದ್ಧ ವಿಮಾನ ನಿಲ್ದಾಣ ಗುಪ್ತಚರ ಘಟಕದ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ–1962ರ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ‘ನನ್ನ ವಿರುದ್ಧ ವಾಯು ಗುಪ್ತಚರ ಘಟಕದ ಕಸ್ಟಮ್ಸ್ ಸೂಪರಿಂಟೆಂಡೆಂಟ್ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳ್ಳರ ಕೊಂಡಿ: ಕಸ್ಟಮ್ಸ್ ಅಂದಾಜು
- ಅಂತರರಾಷ್ಟ್ರೀಯ ವಿಮಾನದ ಮೂಲಕ ಚಿನ್ನವನ್ನು ಸಾಗಿಸಲಾಗುತ್ತದೆ.
- ಪ್ರಯಾಣಿಕರು ಇಳಿಯುವ ಮೊದಲು ನಿರ್ದಿಷ್ಟ ಆಸನ ಸಂಖ್ಯೆಯಲ್ಲಿ ಅದನ್ನು ಪೂರ್ವ ನಿರ್ಧರಿತ ಆಸನದ ಕೆಳಗೆ ಮರೆ ಮಾಡಿ ಇರಿಸಲಾಗಿರುತ್ತದೆ.
- ಪ್ರಯಾಣಿಕ ನಿಷೇಧಿತ ವಸ್ತುವನ್ನು ಅಲ್ಲೇ ಬಿಟ್ಟು ವಿಮಾನದಿಂದ ಇಳಿದು ಹೊರಗೆ ಬರುತ್ತಾನೆ.
- ಎಲ್ಲರೂ ಇಳಿದ ನಂತರ ವಿಮಾನದೊಳಕ್ಕೆ ಕಾನೂನುಬದ್ಧವಾಗಿ ಪ್ರವೇಶಿಸುವ ಶುಚಿ ಸಿಬ್ಬಂದಿ, ಮರೆಮಾಡಿಟ್ಟ ಪ್ಯಾಕೆಟ್ ಅನ್ನು ತೆಗೆದಿರಿಸಿಕೊಳ್ಳುತ್ತಾರೆ.
- ನಿಯಮಿತವಾಗಿ ಶುಚಿಗೊಳಿಸುವ ಕಾರ್ಯಾಚರಣೆಯ ಹೊದಿಕೆಯ ಅಡಿಯಲ್ಲಿ ಕಳ್ಳಸಾಗಣೆ ವಸ್ತುವನ್ನು ಪೂರ್ವನಿಗದಿತ ಸ್ಥಳದಲ್ಲಿ ಇರಿಸಲಾಗುತ್ತದೆ.
- ಕಸ ಅಥವಾ ಶುಚಿಗೊಳಿಸುವ ವಸ್ತುಗಳ ನಡುವೆ ಅದನ್ನು ಮರೆಮಾಡಿಟ್ಟ ನಂತರ ವಿಮಾನ ಮತ್ತು ರನ್ವೇ ಪ್ರದೇಶದಿಂದ (ಟಾರ್ಮ್ಯಾಕ್ ಏರಿಯಾ) ಆಚೆಗೆ ಸಾಗಿಸಲಾಗುತ್ತದೆ.
- ಅಲ್ಲಿಂದ ಅದು ಮತ್ತೊಬ್ಬರ ಕೈ ಸೇರುತ್ತದೆ.
ಅರ್ಜಿದಾರರು ತಮ್ಮ ಮುಗ್ಧತೆಯನ್ನು ವಿಚಾರಣೆಯಲ್ಲಿ ಪ್ರದರ್ಶಿಸಬೇಕು. ಷೋಕಾಸ್ ನೋಟಿಸ್ ಸ್ಪಷ್ಟ ಉತ್ತರವನ್ನು ಬಯಸುತ್ತದೆಯೇ ಹೊರತು ತಪ್ಪಿತಸ್ಥರು ಎಂದು ಘೋಷಿಸುವುದಿಲ್ಲ ಎಂ.ನಾಗಪ್ರಸನ್ನ, ನ್ಯಾಯಮೂರ್ತಿ
