ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಸುತ್ತ ಮತ್ತೊಮ್ಮೆ ರಾಜಕೀಯ ಬಿಸಿ ಏರಿದೆ. ಈ ಯೋಜನೆಗೆ ರೈತರ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ ಮರುಕ್ಷಣದಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಕ್ತ ಚರ್ಚೆಯ ಸವಾಲೆಸೆದಿದ್ದಾರೆ.
“ದಿನಾಂಕ, ಸಮಯ, ಸ್ಥಳ ಅವರೇ ಹೇಳಲಿ. ಮೂರು ದಿನ ಮುಂಚೆ ತಿಳಿಸಿದರೆ ಸಾಕು, ನಾನು ಅಲ್ಲಿಗೆ ಬರುತ್ತೇನೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ತಮ್ಮ ಜೊತೆ ದೊಡ್ಡ ತಂಡ ತಂದರೂ ತಾವು ಒಬ್ಬರೇ ಬರುತ್ತೇನೆ, ಸ್ಥಳೀಯ ಶಾಸಕನಾಗಿ ರೈತರ ಪರವಾಗಿ ನೇರವಾಗಿ ಉತ್ತರ ಕೊಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಚರ್ಚೆ ಗೌರವಯುತವಾಗಿ ನಡೆಯಲಿದೆ, ಯಾವ ಅಸಭ್ಯ ಭಾಷೆಯೂ ಬಳಕೆಯಾಗದು ಎಂದೂ ಅವರು ಭರವಸೆ ನೀಡಿದ್ದಾರೆ.
ಸಿಮೆಂಟ್-ಸ್ಟೀಲ್ ಬೆಲೆ ಪ್ರಶ್ನೆ: ಕೇಂದ್ರ ಸರ್ಕಾರದ ಮೇಲೆಯೂ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸ್ಟೀಲ್ ಮತ್ತು ಸಿಮೆಂಟ್ ಬೆಲೆ ಟನ್ಗೆ ಸಾವಿರಾರು ರೂಪಾಯಿ ಹೆಚ್ಚಾಗಿದ್ದರ ಬಗ್ಗೆ ಮೊದಲು ಕುಮಾರಸ್ವಾಮಿಯವರನ್ನೇ ಕೇಳಬೇಕು ಎಂದು ರೈತರು ಸಲಹೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹೈಕಮಾಂಡ್ ಕರೆದರೆ ದೆಹಲಿಗೆ: ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೇಳಿದಾಗ, ಹೈಕಮಾಂಡ್ ಕರೆದಾಗ ಮಾತ್ರ ದೆಹಲಿಗೆ ಹೋಗುತ್ತೇನೆ ಎಂದ ಡಿ.ಕೆ.ಶಿವಕುಮಾರ್, “ಪಕ್ಷಕ್ಕಾಗಿ ಕಷ್ಟಪಟ್ಟಿದ್ದೇನೆ, ಭಕ್ತಿಗೆ ತಕ್ಕಂತೆ ಭಗವಂತ ಒಲಿಯಬೇಕು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.



