ಖಾಟ್ಮಂಡು (ಸಂಭ್ರಮಪ್ರಭ ನ್ಯೂಸ್): ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ದಿಢೀರ್ ಸಂಭವಿಸಿದ ಭೀಕರ ಪ್ರವಾಹ ಅಪಾರ ಹಾನಿ ಸೃಷ್ಟಿಸಿದೆ. ನೋಡನೋಡುತ್ತಿದ್ದಂತೆಯೇ ಕಟ್ಟಡಗಳು, ನೂರಾರು ಮನೆಗಳು, ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಈ ದಿಢೀರ್ ಪ್ರವಾಹಕ್ಕೆ ಭೂಕಂಪ ಹಾಗೂ ಹಿಮಪಾತವೇ ಪ್ರಮುಖ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಭಾರತೀಯರು ಸೇರಿದಂತೆ 400ರ ಸಮೀಪ ಯಾತ್ರಾರ್ಥಿಗಳು ನಾಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಪ್ರವಾಹಕ್ಕೆ ಅಸಲಿ ಕಾರಣವೇನು? ಹಿಮದ ಕಟ್ಟೆ ಒಡೆದಿದ್ದೇಗೆ?
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖಾನಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ, ಟಿಬೆಟ್ ಭಾಗದಲ್ಲಿ ಸಂಭವಿಸಿದ ಭೂಕಂಪನವು ದೊಡ್ಡ ಮಟ್ಟದ ಹಿಮಪಾತಕ್ಕೆ (Avalanche) ಕಾರಣವಾಯಿತು. ಇದೇ ಭೀಕರ ಪ್ರವಾಹವನ್ನು ಸೃಷ್ಟಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ಪ್ರಕಾರ, ಟಿಬೆಟ್ ಗಡಿಯ ಗೋಸಾಯ್ಕುಂಡದಿಂದ 47 ಕಿ.ಮೀ ಉತ್ತರಕ್ಕೆ ಬೆಳಿಗ್ಗೆ 8:37ರ ಸುಮಾರಿಗೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪನದ ಬೆನ್ನಲ್ಲೇ ಉಂಟಾದ ಭಾರೀ ಹಿಮಪಾತವು ‘ಲ್ಹೆಂಡೆ’ (Lhende) ನದಿಯ ಹರಿವನ್ನು ತಡೆಹಿಡಿದಿದೆ. ಇದರಿಂದ ಅಪಾರ ಪ್ರಮಾಣದ ನೀರು ಒಂದೆಡೆ ಶೇಖರಣೆಯಾಗಿ, ಮಂಜುಗಡ್ಡೆಗಳ ಆ ಕಟ್ಟೆ ಏಕಾಏಕಿ ಒಡೆದಿದೆ. ಪರಿಣಾಮ, ಭಾರೀ ಪ್ರಮಾಣದ ನೀರು ದಿಢೀರನೆ ‘ಭೋಟೆಕೋಶಿ’ (Bhotekoshi) ನದಿಗೆ ನುಗ್ಗಿದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಭೋಟೆಕೋಶಿ ನದಿಯಲ್ಲಿ ಉಂಟಾದ ಈ ದಿಢೀರ್ ಜಲಪ್ರಳಯ ರಸುವಾ, ಧಾದಿಂಗ್ ಹಾಗೂ ಖಾಟ್ಮಂಡು ನೈಋತ್ಯ ಭಾಗದ ನುವಾಕೋಟ್ ಜಿಲ್ಲೆಗಳಲ್ಲಿ ನುಗ್ಗಿ ಹಾಹಾಕಾರ ಸೃಷ್ಟಿಸಿದೆ ಎಂದು ಖಾಟ್ಮಂಡು ವಿವಿಯ ಹವಾಮಾನ ಸಂಶೋಧಕ ಹಾಗೂ ಪ್ರೊಫೆಸರ್ ರಿಜನ್ ಭಕ್ತ ಕಾಯಸ್ಥ ವಿವರಿಸಿದ್ದಾರೆ.
ನಾಪತ್ತೆಯಾದ 400 ಯಾತ್ರಾರ್ಥಿಗಳು!
ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ನೂರಾರು ಭಕ್ತರು ಈ ಪ್ರವಾಹದ ಭೀಕರತೆಗೆ ಸಿಲುಕಿದ್ದಾರೆ. ಬುಧವಾರ ಬೆಳಿಗ್ಗೆ ರಸುವಾಗಢಿ ಚೆಕ್ಪೋಸ್ಟ್ ಮೂಲಕ ಗಡಿ ದಾಟಬೇಕಿದ್ದ 384 ಯಾತ್ರಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ಅಂಕಿ-ಅಂಶಗಳು ತಿಳಿಸಿವೆ.
ನಾಪತ್ತೆಯಾಗಿರುವವರ ಪೈಕಿ 105 ಭಾರತೀಯರು, 37 ಅನಿವಾಸಿ ಭಾರತೀಯರು (NRIs) ಹಾಗೂ 93 ನೇಪಾಳಿ ನಾಗರಿಕರು ಸೇರಿದ್ದಾರೆ. ವಿವಿಧ ಟ್ರಾವೆಲ್ ಏಜೆನ್ಸಿಗಳ ಮೂಲಕ ತೆರಳಿದ್ದ ಈ ಯಾತ್ರಾರ್ಥಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಕೆಲವೇ ಕೆಲವು ಮಂದಿ ಮಾತ್ರ ರಕ್ಷಣಾ ಪಡೆಗಳ ಸಂಪರ್ಕಕ್ಕೆ ಸಿಕ್ಕಿದ್ದಾರೆ.
ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ
ನೇಪಾಳದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ನಾಯಕ ಬಾಲೇನ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಹಾಗೂ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಭಾರತದಿಂದ ಎಲ್ಲ ರೀತಿಯ ಮಾನವೀಯ ನೆರವು ಹಾಗೂ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಭಾರತೀಯ ರಾಯಭಾರ ಕಚೇರಿಯಿಂದ ತುರ್ತು ಸಹಾಯವಾಣಿ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರವಾಹದಲ್ಲಿ ಸಿಲುಕಿರುವ ಭಾರತೀಯರ ನೆರವಿಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ವಾಟ್ಸಾಪ್ ಮೂಲಕವೂ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ:
-
+977 985 131 6807
-
+977 970 910 7500
ದಿಢೀರ್ ಅಪ್ಪಳಿಸಿದ ಜಲಪ್ರಳಯದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದೈತ್ಯ ಅಲೆಗಳು ಅಪ್ಪಳಿಸಿ, ಕ್ಷಣಾರ್ಧದಲ್ಲಿ ಕಟ್ಟಡಗಳು ಹಾಗೂ ವಾಹನಗಳು ಪ್ರವಾಹಕ್ಕೆ ಕೊಚ್ಚಿ ಹೋಗುವ ದೃಶ್ಯಗಳು ಎದೆಗುಂದಿಸುವಂತಿವೆ.


