ಪಾವಗಡ: ಸರ್ಕಾರಿ ಕಚೇರಿಯಲ್ಲೇ ಮಹಿಳಾ ನೌಕರರಿಗೆ ಸುರಕ್ಷತೆ ಇಲ್ಲದಂತಹ ಆಘಾತಕಾರಿ ಘಟನೆಯೊಂದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ಬೆಳಕಿಗೆ ಬಂದಿದೆ. ಹೊರಗುತ್ತಿಗೆ ನೌಕರೆಯನ್ನು ಕೆಲಸದಲ್ಲಿ ಕಾಯಂ ಮಾಡಿಕೊಡುವ ಆಮಿಷವೊಡ್ಡಿ ಸರ್ಕಾರಿ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಘಟನೆಯ ವಿವರ: ಪಾವಗಡದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಗೋಪಾಲಪ್ಪ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರೆಗೆ ಕೆಲಸ ಖಾಯಂ ಮಾಡಿಸಿಕೊಡುವುದಾಗಿ ಈತ ಆಮಿಷವೊಡ್ಡಿದ್ದನು ಎನ್ನಲಾಗಿದೆ. ತನ್ನ ಕಾಮವಾಚ್ಛೆಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ನೊಂದ ಯುವತಿ ಆರೋಪಿಸಿದ್ದಾರೆ. ಅಧಿಕಾರಿಯ ಕಿರುಕುಳದಿಂದ ಬೇಸತ್ತ ಯುವತಿ ಕೊನೆಗೂ ನ್ಯಾಯಕ್ಕಾಗಿ ಕಾನೂನಿನ ಮೊರೆ ಹೋಗಿದ್ದಾರೆ.

ಎಫ್‌ಐಆರ್ ದಾಖಲು – ಸಂಭ್ರಮಪ್ರಭಕ್ಕೆ ಅಧಿಕಾರಿ ಕುಮಾರ್ ಸ್ಪಷ್ಟನೆ

ಈ ಪ್ರಕರಣದ ಕುರಿತು ಪಾವಗಡ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಕುಮಾರ್ ಅವರು ಸಂಭ್ರಮಪ್ರಭ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು: “ಕಳೆದ ತಿಂಗಳು 23ನೇ ತಾರೀಖಿನಂದು ಈ ಘಟನೆ ನಡೆದಿದ್ದು, ಆರೋಪಿ ಅಧಿಕಾರಿಯ ವಿರುದ್ಧ ಈಗಾಗಲೇ ಪಾವಗಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಅಲ್ಲದೆ, ಈ ಗಂಭೀರ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ” ಎಂದು ತಿಳಿಸಿದ್ದಾರೆ.

ಪೊಲೀಸರ ವಿಳಂಬಕ್ಕೆ ಆಕ್ರೋಶ – ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಗೆ ಆಗ್ರಹ

ಯುವತಿ ದೂರು ನೀಡಿ ಹತ್ತು ದಿನಗಳು ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಇದು ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾನೂನು ಕ್ರಮಕ್ಕೆ ಆಗ್ರಹ: ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಆರೋಪಿ ಅಧಿಕಾರಿಯ ಮೇಲೆ ಕಾನೂನು ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಕಾಮುಕ ಮನಸ್ಥಿತಿಯ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಆರೋಪಿ ಗೋಪಾಲಪ್ಪನನ್ನು ಬಂಧಿಸುವ ಮೂಲಕ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
Share.
Leave A Reply

Exit mobile version