Updated By: Priyalachhi

ಬೆಂಗಳೂರು: ಅಡಿಕೆ ಸೇರಿದಂತೆ ಮತ್ತಿತರ ಬೆಳೆಗಳಿಗೆ ನೀಡಲಾಗುವ ಬೆಳೆ ವಿಮೆ ಪರಿಹಾರದ ವ್ಯಾಪ್ತಿಗೆ ತೆಂಗು ಬೆಳೆಯನ್ನ ಪರಿಗಣಿಸಬೇಕೆಂದು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಸಚಿವರ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಚಿದಾನಂದಗೌಡ: ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಚಿದಾನಂದ್ ಎಂ.ಗೌಡ, ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದೆ. ಆದರೆ ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುವ ಕೆಂಪುಮೂತಿ ಹುಳ ಹಾಗೂ ಅಣಬೆ ರೋಗದಿಂದ ಬೆಳೆ ನಷ್ಟಗೊಂಡು ರೈತರು ಭಾದಿತರಾಗುತ್ತಿದ್ದಾರೆ. ಹೀಗಾಗಿ ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆ ವಿಮೆ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ತೆಂಗಿನ ತೋಟಗಳ ಪುನಃಶ್ಚೇತನಕ್ಕೆ ಸಹಾಯಧನ ಎಂದ ಸಚಿವರು: ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತೆಂಗಿನಕಾಯಿಗೆ ಉತ್ತಮ ಬೆಲೆ ಇರುವುದು ಹರ್ಷ ತಂದಿದೆ. ತೆಂಗಿನ ತೋಟಗಳ ಪುನಃಶ್ಚೇತನ ಹಾಗೂ ಕೀಟ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಪ್ರತಿ ಹೆಕ್ಟೇರ್ ಗೆ 54 ಸಾವಿರ ಪರಿಹಾರವನ್ನ ಎರಡು ವರ್ಷದ ಅವಧಿಗೆ ಸಹಾಯಧನ ನೀಡಲಾಗುತ್ತಿದೆ. ಆದರೆ, ಬೆಳೆ ನಷ್ಟ ಪರಿಹಾರ ಯೋಜನೆಯು ತೋಟಗಾರಿಕೆ ಇಲಾಖೆಯಲ್ಲಿಲ್ಲ. 2023ರಿಂದ ಈವರೆಗೂ ಕೆಂಪುಮೂತಿ ಹುಳುವಿನಿಂದ 10.56 ಲಕ್ಷ ಹಾಗೂ ಅಣಬೆ ರೋಗದಿಂದ 26.48 ಲಕ್ಷ ತೆಂಗಿನ ಮರಗಳು ನಾಶವಾಗಿದೆ. ತೆಂಗು ಬೆಳೆಯನ್ನ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದರು.

11 ಶೈತ್ಯಾಗಾರಗಳ ಘಟಕ ತೆರೆಯಲು ಅನುಮತಿ; ತೋಟಗಾರಿಕೆ ಬೆಳೆಗಳು ಬೇಗನೇ ಹಾಳಾಗದಂತೆ ತಡೆಯಲು ರಾಜ್ಯದ 11 ಶೈತ್ಯಾಗಾರ ಘಟಕ ತೆರೆಯಲು ಅನುಮೋದನೆ ನೀಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಕೇಳಿದ ಪ್ರಶ್ನೆಗೆ ಚಲುವರಾಯಸ್ವಾಮಿ ತಿಳಿಸಿದರು. ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ರೈತರಿಗೆ ಅನುಕೂಲಕ್ಕಾಗಿ ದಾವಣಗೆರೆ, ಹಾಸನ, ಶಿವಮೊಗ್ಗ, ಬೆಂಗಳೂರು ನಗರ, ರಾಮನಗರ ಬೆಳಗಾವಿ ಸೇರಿದಂತೆ 11 ಕಡೆಗಳಲ್ಲಿ ಶೈತ್ಯಾಗಾರ ಘಟಕ ತೆರೆಯಲಾಗುತ್ತಿದೆ ಎಂದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version