Updated By: Priyalachhi
ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ (LalBagh) 216ನೇ ಫಲಪುಷ್ಪ ಪ್ರದರ್ಶನ (Flower Show) ಆಯೋಜಿಸಲಾಗಿದ್ದು. ಈ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ತೋಟಗಾರಿಕೆ ಇಲಾಖೆ ಈ ಬಾರಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ ತೇಜಸ್ವಿ-ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ನಡೆಸುತ್ತಿದೆ.
ಫಲಪುಷ್ಪ ಪ್ರದರ್ಶನದಲ್ಲಿ 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 35 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗಿದೆ. ಈ ನಡುವೆ ಫಲಪುಷ್ಪ ಪ್ರದರ್ಶನದ ನಂತರ ಈ ಹೂಗಳನ್ನು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಉದ್ಭವಾಗಿದ್ದು, ಇದಕ್ಕೆ ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ಅವರು ಉತ್ತರ ನೀಡಿದ್ದಾರೆ.
ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾದ ಒಟ್ಟು 35 ಲಕ್ಷ ವೈವಿಧ್ಯಮಯ ಹೂವುಗಳಲ್ಲಿ 23 ಲಕ್ಷ ಹೂವುಗಳು ಕುಂಡಗಳಲ್ಲಿ ಬೆಳೆಯುತ್ತವೆ. ಈ ಕುಂಡಗಳಲ್ಲಿ ಬೆಳೆಯುವ ಹೂವುಗಳಿಂದ ಬೀಜಗಳು ಪಕ್ವವಾದಾಗ, ಅವುಗಳನ್ನು ಕೊಯ್ಲು ಮಾಡಲಾಗುತ್ತದೆ, ನಂತರ ಹೊಸ ಕುಂಡಗಳಲ್ಲಿ ಸಸಿಗಳನ್ನು ಬೆಳೆಯಲಾಗುತ್ತದೆ. ಅಲಂಕಾರದಲ್ಲಿ ಬಳಸುವ ಸುಮಾರು ಒಂಬತ್ತು ಲಕ್ಷ ಹೂವುಗಳನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈ ಗೊಬ್ಬರವನ್ನು ಲಾಲ್ಬಾಗ್ನಲ್ಲಿಯೇ ಕೃಷಿಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
