Updated By: Priyalachhi
ಕಾರವಾರ: ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸೀಬರ್ಡ್ ನೌಕಾನೆಲೆ ಭೂಸ್ವಾಧೀನ ಪ್ರಕ್ರಿಯೆಯ ಸಂತ್ರಸ್ತರಿಗೆ ಕೊನೆಗೂ ನ್ಯಾಯ ಸಿಗುವ ಕಾಲ ಬಂದಿದೆ. ಭೂಸ್ವಾಧೀನ ಕಾಯ್ದೆಯ 28 (ಎ) ಪ್ರಕರಣಗಳ ಅಡಿ ನಿರಾಶ್ರಿತರಿಗೆ ಸಲ್ಲಬೇಕಾದ ಹೆಚ್ಚುವರಿ ಪರಿಹಾರದ ವಿಳಂಬಕ್ಕೆ ಈಗ ಶಾಶ್ವತ ಪರಿಹಾರ ಸಿಗುತ್ತಿದ್ದು, ಈ ಪ್ರಕ್ರಿಯೆ ಯಶಸ್ಸಿನ ಹಾದಿಯಲ್ಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, “ಸೀಬರ್ಡ್ ಯೋಜನೆಯಡಿ ಭೂಮಿ ಕಳೆದುಕೊಂಡ ಮಾಲೀಕರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ಶೀಘ್ರವಾಗಿ ತಲುಪಿಸುವ ನಿಟ್ಟಿನಲ್ಲಿ ನಡೆಸಿದ ವಿಶೇಷ ಪ್ರಯತ್ನಗಳು ಫಲ ನೀಡುತ್ತಿವೆ. ಒಟ್ಟು ಬಾಕಿ ಉಳಿದಿರುವ 256 ಪ್ರಕರಣಗಳ ಪೈಕಿ, ಈಗಾಗಲೇ ಮೊದಲ ಹಂತದಲ್ಲಿ 57 ಪ್ರಕರಣಗಳಿಗೆ ಸಂಬಂಧಿಸಿದಂತೆ 10 ಕೋಟಿ ರೂಪಾಯಿಗಳನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ, ಇಂದು (ಡಿಸೆಂಬರ್ 19, 2025) ಮತ್ತೊಂದು ಪ್ರಮುಖ ಹಂತದಲ್ಲಿ 116 ಪ್ರಕರಣಗಳಿಗೆ ಒಟ್ಟು ₹27,66,93,397 ಮೊತ್ತದ ಹಣ ಬಿಡುಗಡೆಯಾಗಿದೆ” ಎಂದು ಅವರು ವಿವರಿಸಿದ್ದಾರೆ.
ಸೀಬರ್ಡ್ ನಿರಾಶ್ರಿತರ ಹಿತದೃಷ್ಟಿಯಿಂದ ಬಾಕಿ ಉಳಿದಿರುವ ಇತರ ಪ್ರಕರಣಗಳನ್ನು ಸಹ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಾಕಿ ಇರುವ ಎಲ್ಲಾ ಭೂಮಾಲೀಕರಿಗೆ ಅತೀ ಶೀಘ್ರದಲ್ಲೇ ಪರಿಹಾರದ ಹಣ ಕೈಸೇರಲಿದೆ ಎಂದು ಸಂಸದರು ಭರವಸೆ ನೀಡಿದ್ದಾರೆ. ದೀರ್ಘಕಾಲದ ಈ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಾಗೇರಿಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ, ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಶ್ರಮಿಸಿದ ಸೀಬರ್ಡ್ ಯೋಜನೆಯ ಅಧಿಕಾರಿ ವರ್ಗ ಹಾಗೂ ಜಿಲ್ಲಾಡಳಿತದ ಕಾರ್ಯವನ್ನೂ ಅವರು ಶ್ಲಾಘಿಸಿದ್ದಾರೆ.
ರೂಪಾಲಿ ನಾಯ್ಕ ಸಂತಸ: ಪ್ರಧಾನಿ, ರಕ್ಷಣಾ ಸಚಿವರು, ಸಂಸದರಿಗೆ ಅಭಿನಂದನೆ: ನೆನೆಗುದಿಗೆ ಬಿದ್ದಿದ್ದ ಸೀಬರ್ಡ್ ನಿರಾಶ್ರಿತರು 116 ಪ್ರಕರಣಗಳಲ್ಲಿ 27,66,93,397 ಕೋಟಿ ರೂ. ಬಿಡುಗಡೆಯಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಾಕಿ ಉಳಿದಿರುವ ಪ್ರಕರಣಗಳಲ್ಲೂ ಶೀಘ್ರದಲ್ಲಿ ಪರಿಹಾರ ವಿತರಿಸಲಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ವಿಶ್ವಾಸ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಈಗಾಗಲೆ ಬಾಕಿ ಇದ್ದ 256 ಪ್ರಕರಣಗಳಲ್ಲಿ ಮೊದಲ ಹಂತದಲ್ಲಿ 57 ಪ್ರಕರಣಗಳಿಗೆ 10 ಕೋಟಿ ರೂಪಾಯಿ ಭೂಮಾಲಕರ ಖಾತೆಗೆ ಜಮಾ ಮಾಡಲಾಗಿತ್ತು. ಶುಕ್ರವಾರ ಮತ್ತೆ 116 ಪ್ರಕರಣಗಳಲ್ಲಿ ಒಟ್ಟೂ 27, 66, 93, 397 ರೂಪಾಯಿ ಪರಿಹಾರದ ಹಣ ಬಿಡುಗಡೆಯಾಗಿದೆ. ಪರಿಹಾರ ಬಿಡುಗಡೆಗೆ ಕಾರಣರಾದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ, ರಕ್ಷಣಾ ಸಚಿವರಾದ ರಾಜನಾಥ ಸಿಂಗ್, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
