Updated By: Priyalachhi

ಬೆಂಗಳೂರು : ಜಂಟಿ‌ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಒಂದು ನಿಮಿಷದ ಭಾಷಣ ವಿಧಾನಸಭೆಯಲ್ಲಿ ಸದ್ದು, ಗದ್ದಲ, ಕೋಲಾಹಲ ಸೃಷ್ಟಿಸಿತು.

ಕಲಾಪ ಆರಂಭವಾಗುತ್ತಿದ್ದ ಹಾಗೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಆಗಬೇಕು. ನಮ್ಮ 18 ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ಮಾಡಿದ್ರು ಅಂತ ಸಸ್ಪೆಂಡ್ ಮಾಡಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ?. ಈ ಸಂಬಂಧ ಸ್ಪೀಕರ್ ರೂಲಿಂಗ್ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಆದರೆ ಹೆಚ್. ಕೆ. ಪಾಟೀಲರು ರಾಜ್ಯಪಾಲರಿಗೆ ಓಡಿ ಹೋದ್ರು ಅಂದಿದ್ದು ಸರಿಯಲ್ಲ. ರಾಜ್ಯಪಾಲರು ರಾಷ್ಟ್ರಗೀತೆ ಹಾಡು ಶುರುವಾಗಿದ್ದಿದ್ರೆ ಇರುತ್ತಿದ್ದರು ಅಂತ ಅಶೋಕ್ ಸಮರ್ಥಿಸಿಕೊಂಡರು.

ಶಾಸಕ ಅಶ್ವತ್ಥ್ ನಾರಾಯಣ್, ಸುನೀಲ್ ಕುಮಾರ್ ಕೂಡಾ ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ರು. ಮಾತಿನ ಭರದಲ್ಲಿ ಸುನೀಲ್ ಕುಮಾರ್ ಅವರು, ಇದು ಗೂಂಡಾ ಸರ್ಕಾರ ಅಂದಿದ್ದು ಕಾಂಗ್ರೆಸ್‌ನವರನ್ನು ಕೆರಳಿಸಿತು. ಈ ವೇಳೆ ಸದನದಲ್ಲಿ ಜಟಾಪಟಿ ಮತ್ತಷ್ಟು ಹೆಚ್ಚಾಯಿತು.

ಇದೇ ವೇಳೆ ಕಾನೂನು ಸಚಿವ ಹೆಚ್‌. ಕೆ. ಪಾಟೀಲ್ ಮಾತನಾಡಿ, ನಿನ್ನೆ ರಾಜ್ಯಪಾಲರ ಕುರಿತು ತಾವು ಮಾತಾಡಿದ್ದನ್ನು ಮತ್ತೆ ಸಮರ್ಥಿಸಿಕೊಂಡರು.

ರಾಜ್ಯಪಾಲರು ಭಾಷಣ ಓದದೇ ತಿರಸ್ಕರಿಸಿದ್ರು.‌ ಆ ಮೂಲಕ ಸಂವಿಧಾನದ 176 (1)ನೇ ವಿಧಿ ಉಲ್ಲಂಘಿಸಿದ್ರು. ಇನ್ನು ರಾಷ್ಟ್ರಗೀತೆ ಹಾಡೋ ಮುನ್ನವೇ ಸದನದಿಂದ ಓಡಿ ಹೋದರು. ರಾಷ್ಟ್ರಗೀತೆಗೂ ಅಪಮಾನ ಮಾಡಿದ್ರು ಅಂತ ವಾದಿಸಿದ್ರು. ನಾನು ಅವರನ್ನು ನಿನ್ನೆ ತಡೆಯಲಿಲ್ಲ. ಸಿಎಂ ಕರೆದ್ರು ಅಂತ ಹಿಂದೆ ಹೋದೆ ಅಷ್ಟೇ, ನಾನೂ ರಾಜ್ಯಪಾಲರಿಗೆ ಅಡ್ಡಿ ಮಾಡಿದೆ ಅನ್ನೋ ಅಶೋಕ್ ಆರೋಪ ಸರಿಯಲ್ಲ ಅಂತ ಹೆಚ್.​​ ಕೆ. ಪಾಟೀಲ್ ಸ್ಪಷ್ಟಪಡಿಸಿದ್ರು.

ಹರಿಪ್ರಸಾದ್ ಪರಿಷತ್ ಸದಸ್ಯರು, ಈ ಸದನದಲ್ಲಿ ಅವರ ಬಗ್ಗೆ ಚರ್ಚೆ ಬೇಡ. ರಾಜ್ಯಪಾಲರು ಸಂವಿಧಾನಕ್ಕೆ, ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಹೀಗಾಗಿ, ಅವರು ಕನ್ನಡ ನಾಡಿನ ಜನರ ಹಾಗೂ ಈ ಸದನದ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಸರ್ಕಾರ ಸಿದ್ಧಪಡಿಸದ ಭಾಷಣ ಓದಬೇಕು. 176(1) ರಡಿ ಭಾಷಣ ಮಾಡಬೇಕು. ದೇಶದಲ್ಲಿ ಇದು ಚರ್ಚೆ ಆಗುತ್ತಿದೆ. ಇಡೀ ದಕ್ಷಿಣ ಭಾರತದಲ್ಲಿ ಚರ್ಚೆ ಆಗುತ್ತಿದೆ. ಬಿಜೆಪಿಯೇತರ ಆಡಳಿತ ಸರ್ಕಾರದಲ್ಲಿ ಈ ತರಹ ಆಗುತ್ತಿದೆ. ರಾಜ್ಯಪಾಲರು ಹೇಗೆ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾತನಾಡುತ್ತೇನೆ. ರಾಜ್ಯಪಾಲರ ಕಚೇರಿಗೆ ಕೇಂದ್ರದಿಂದ ಎಷ್ಟು ಕರೆ ಬಂದಿದೆ ಎಂದು ಮಾತನಾಡಬಹುದು ಎಂದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version