ಬೆಳಗಾವಿ: ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರ ಪ್ರಚಾರ ಕಾರ್ಯ ಜೋರಾಗಿದೆ. ರಾಜ್ಯ ಹಾಗೂ ಕೇಂದ್ರದ ಪ್ರಮುಖರು ವಿವಿಧ ಜಿಲ್ಲೆಗಳಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಬೆಳಗಾವಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ ಪರ ರೋಡ್ ಶೋ ನಡೆಸಿದ್ದರು.
ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ ʼಬೆಳಗಾವಿ ಜಿಲ್ಲೆ ಅಭಿವೃದ್ಧಿ ಪರ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣ ರಾಜಕಾರಣ ನಡೆಯುವುದಿಲ್ಲ ಎಂದಿದ್ದಾರೆ.
ಬೆಳಗಾವಿ ಇದು ಗಂಡು ಮೆಟ್ಟಿದ ನಾಡು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಮಹಾನ್ ವ್ಯಕ್ತಿಗಳು ಜನಿಸಿದ ಸ್ಥಳವಿದು. ಕಾಂಗ್ರೆಸ್ನ ಗ್ಯಾರೆಂಟಿ ಕಾರ್ಡ್ ಏನಿದ್ದರೂ ಚುನಾವಣೆ ಮುಗಿಯುವವರೆಗೂ ಮಾತ್ರ, ಆಮೇಲೆ ಗಳಗಂಟಿ ಆಗುತ್ತದೆʼ ಎಂದು ವ್ಯಂಗ್ಯವಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅಧಿಕಾರದ ಆಸೆ ಇರಿಸಿಕೊಂಡವರಲ್ಲ
ʼರಮೇಶ್ ಜಾರಕಿಹೊಳಿ ನಾಗೇಶ್ ಮನೊಳ್ಕರ್ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಗೋಕಾಕ್ ಕ್ಷೇತ್ರ ಬಿಟ್ಟು ಇಲ್ಲಿ ಕಾಲ ಕಳೆಯುತ್ತಿದ್ದಾರೆ. ರಮೇಶ್ ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಅವರು ಗುರಿ ಇಟ್ಟರೆ ಗೆಲುವು ಖಚಿತ. ಯಾಕೆಂದರೆ ಅವರು ಜನರ ಪ್ರೀತಿ ವಿಶ್ವಾಸ ಗಳಿಸಿ ನಾಯಕರಾದವರೇ ಹೊರತು ಅವರು ಅಧಿಕಾರದ ನಾಯಕರಾಗಿಲ್ಲʼ ಎಂದು ರಮೇಶ್ ಜಾರಕಿಹೊಳಿ ಅವರ ಕುರಿತು ವಿಶ್ವಾಸ ಮಾತುಗಳನ್ನಾಡಿದ್ದಾರೆ.
ಬಿಜೆಪಿ ಅಧಿಕಾರ ನಡೆಸಿದ್ದು ಮೂರು ವರ್ಷ ಮಾತ್ರ!
ʼನಮ್ಮ ಸರ್ಕಾರ ಐದು ವರ್ಷದಲ್ಲಿ ಕೇವಲ ಮೂರು ವರ್ಷ ಮಾತ್ರ ಅಧಿಕಾರ ನಡೆಸಿದೆ. ಒಂದು ವರ್ಷ ಸಮ್ಮಿಶ್ರ ಸರ್ಕಾರ, ಒಂದು ವರ್ಷ ಕೋವಿಡ್ನಲ್ಲಿ ಕಾಲಹರಣವಾಯಿತು. ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ 2.5ಸಾವಿರ ಕೋಟಿ ಪರಿಹಾರ ನೀಡಿದ್ದೆವು. ಕಳೆದ ನಾಲ್ಕು ವರ್ಷದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 54 ಲಕ್ಷ ರೈತರಿಗೆ 16 ಸಾವಿರ ಕೋಟಿ ಅನುದಾನ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಈ ರೀತಿಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆʼ ಎಂದಿದ್ದಾರೆ.
ನಾನು ಓಡಿ ಹೋಗುವ ಮುಖ್ಯಮಂತ್ರಿಯಲ್ಲ
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ನವರು ಮಾತ್ರ ಮುಂದೆ ಹೋಗಿ, ದೀನ ದಲಿತರನ್ನು ಅಲ್ಲಿಯೇ ಇಟ್ಟಿದ್ದಾರೆ. ಸಿದ್ದರಾಮಯ್ಯ ಒಳಮೀಸಲಾತಿ ವಿಷಯ ಬಂದಾಗ ಮಾತನಾಡದೇ ಓಡಿ ಹೋದರು. ಆದರೆ, ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನಾನು ಜೇನುಗೂಡಿಗೆ ಕೈ ಹಾಕಿ ಅವರಿಗೆ ಜೇನುತುಪ್ಪ ನೀಡಿದ್ದೇನೆʼ ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿದಾಯ್ದಿದ್ದಾರೆ.