ರಾಜಕೀಯರಾಜ್ಯ

ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ: ವಿನಯ್ ಗುರೂಜಿಗೆ ಶಾಸಕ ಹೆಚ್ ಡಿ ತಮ್ಮಯ್ಯ ಮನವಿ

Bless DK Shivakumar to become CM: MLA HD Tammaiah appeals to Vinay Guruji

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಚಿಕ್ಕಮಗಳೂರು: ನಾವು ನಿಮ್ಮಿಂದ ಬೇರೆ ಏನನ್ನೂ ಕೇಳುವುದಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್‌ ಅವರನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ವೇದಿಕೆ ಮೇಲೆಯೇ ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್ ಡಿ ತಮ್ಮಯ್ಯ ಅವರು ವಿನಯ್ ಗುರೂಜಿ ಬಳಿ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ ಕೆ ಶಿವಕುಮಾರ್‌ ಸಿಎಂ ಆಗುವ ಆಸೆಯನ್ನು ನೆರೆದಿದ್ದ ಜನರ ಮುಂದೆ ಹೊರಹಾಕಿದ್ದಾರೆ.

ಅವಧೂತ ವಿನಯ್ ಗುರೂಜಿ ಬಳಿ ಮನವಿ: ವಿನಯ್ ಗುರೂಜಿ ಬಳಿ ವೇದಿಕೆ ಮೇಲೆಯೇ ಮನವಿ ಮಾಡಿದ ಶಾಸಕ ಹೆಚ್ ಡಿ ತಮ್ಮಯ್ಯ, ಇವತ್ತು ನಯನ ಮೋಟಮ್ಮ ಇರಬಹುದು, ಸುಧಾಕರ್ ಇರಬಹುದು, ಲಕ್ಷ್ಮೀ ಹೆಬ್ಬಾಳ್ಕರ್ ಇವರ ಹಿಂದಿನ ಎಲ್ಲಾ ಶಕ್ತಿ ನಮ್ಮ ಡಿ ಕೆ ಶಿವಕುಮಾರ್. ಅವರು ನಮಗೆಲ್ಲರಿಗೂ ಟಿಕೆಟ್ ನೀಡಿ ತುಂಬಾ ಸಹಕಾರ ಮಾಡಿದ್ದಾರೆ. ಅವರನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ ಬಳಿ ಮನವಿ ಮಾಡಿಕೊಂಡಿದ್ದಾರೆ.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಅವಧೂತ ವಿನಯ್ ಗುರೂಜಿ ಮೂರು ಉಂಗುರ ಮಾಡಿಸಿದ್ದರು. 2018ರಲ್ಲಿ ಒಂದನ್ನು ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದರು. ಮತ್ತೊಂದನ್ನ ಬಿ ಎಸ್​ ಯಡಿಯೂರಪ್ಪನವರಿಗೆ ನೀಡಿದ್ದರು. ಇಬ್ಬರೂ ಮುಖ್ಯಮಂತ್ರಿ ಆಗಿದ್ದರು. ಉಳಿದೊಂದು ಉಂಗುರವನ್ನ ಡಿ ಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದರು. ನಾನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೆಚ್ ಡಿ ಕುಮಾರಸ್ವಾಮಿಯವರು ಸಿಎಂ ಆಗುವುದಿಲ್ಲವಾ? ಎಂದು ಕೇಳಿದ್ದಕ್ಕೆ ಇಲ್ಲ ಇಲ್ಲ ಬರುವುದಿಲ್ಲ. ಡಿಕೆಶಿ ಸರ್ಕಾರ ಬರುವುದು ಎಂದು ಹೇಳಿದ್ದರು ಎಂದು ತಿಳಿಸಿದರು.

ಬಂಡೆಯೊಳಗೊಂದು ಮುಗ್ಧ ಮನಸ್ಸು: ಹೆಚ್ ಡಿ ತಮ್ಮಯ್ಯ ಹಾಗೂ ಶರವಣ ಅವರ ಮನವಿಯನ್ನು ಪುರಸ್ಕರಿಸಿದ ಅವಧೂತ ವಿನಯ್ ಗುರೂಜಿ, ಡಿ ಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಅವರ ಆ ಬಯಕೆ ಈಡೇರಿಕೆಗೆ ದಿನ ಬಹಳ ದೂರ ಇಲ್ಲ. ಡಿ ಕೆ ಶಿವಕುಮಾರ್ ಮಗುವಿನಂತಹ ಮನಸ್ಸಿನವರು. ಅವರು ಮಠಕ್ಕೆ ಚಿರಪರಿಚಿತರು. ದೇವರುಗಳು ಇರುವುದೇ ಬಂಡೆಯ ಮೂರ್ತಿಯಲ್ಲಿ. ನಾವು ಮೊದಲು ಅದನ್ನು ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಎಂದು ಡಿ ಕೆ ಶಿವಕುಮಾರ್‌ ಅವರ ಕುರಿತು ಹೇಳಿದ ಅವರು, ಡಿಕೆಶಿ ಸಿಎಂ ಆಗುವ ಭವಿಷ್ಯವನ್ನು ಅವಧೂತ ವಿನಯ್ ಗುರೂಜಿ ಕೂಡ ನುಡಿದಿದ್ದಾರೆ. ಇದೇ ವೇಳೆ ಡಿ ಕೆ ಶಿವಕುಮಾರ್‌ ಅವರನ್ನು ಹಾಡಿ ಹೊಗಳಿದ್ದಾರೆ.

ಅವಧೂತ ವಿನಯ್ ಗುರೂಜಿ ಅವರು ಮಾತನಾಡಿರುವುದು
ಒಟ್ಟಾರೆಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೂಡ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗರಿಗೆ ಇಷ್ಟ ಇಲ್ವಾ ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ ಜನ ಮಾತ್ರ ಅಯ್ಯೋ, ಸಿಎಂ ಯಾರಾದರೂ ಆಗಲಿ. ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ದಿನಕ್ಕೊಂದು ಕಾನೂನು ತರುವ ಬದಲು ನಿಬಂಧನೆಗಳಿಲ್ಲದೆ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದರೆ ಸಾಕು ಎನ್ನುತ್ತಿದ್ದಾರೆ.

ಇದನ್ನೂ ಓದಿ...

Back to top button
>