ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿ ಸಮಾಧಾನ ತಂದಿಲ್ಲ ಎಂದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಿಜಯದಶಮಿಯಂದು ನೀರು ಹರಿಸು ವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದರು.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಮಂಗಳವಾರ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎತ್ತಿನಹೊಳೆ ಕಾಮಗಾರಿ ಪರಿಶೀಲನೆಗೆ ಎರಡನೇ ಬಾರಿ ಬಂದಿದ್ದೀನಿ. 24 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದೆ. ಆದರೂ ಪ್ರಗತಿ ನನಗೆ ಸಮಾಧಾನ ತಂದಿಲ್ಲ. ಹಾಗಾಗಿ ಇಂದು ಭೇಟಿ ನೀಡಿದ್ದೇನೆ. ಅನೇಕ ಸಮಸ್ಯೆಗಳನ್ನು ಗುತ್ತಿಗೆದಾರರು, ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಕಾಲಮಿತಿ ಕೊಟ್ಟಿದ್ದೇನೆ
ನೂರು ದಿನದಲ್ಲಿ ನೀರನ್ನು ಪಂಪ್ ಔಟ್ ಮಾಡಬೇಕು ಎಂದು ಎಲ್ಲಾ ಅಧಿಕಾರಿಗಳಿಗೂ ಜವಾಬ್ದಾರಿ ಕೊಟ್ಟಿದ್ದೀನಿ. ಸರಾಗವಾಗಿ ಕೆಲಸ ನಡೆಯಲಿ ಎಂದಿದ್ದೇನೆ. ವಿಜಯದಶಮಿ ದಿನ ನೀರು ಹರಿಸುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ನನಗೆ ನಂಬಿಕೆಯಿಲ್ಲ. ನೂರು ದಿನದಲ್ಲಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ನೂರು ದಿನದಲ್ಲಿ ನೀರು ಹರಿಯುವ ಭರವಸೆ ನನಗಿದೆ ಎಂದರು.
ರೈತರಿಗೆ ಉಳಿದಿರುವ ಪರಿಹಾರ ನೀಡಲು ಪಟ್ಟಿ ತಯಾರು ಮಾಡಲು ಹೇಳಿದ್ದೀನಿ. ಗುತ್ತಿಗೆದಾರರು ನಾಳೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಟೈಂ ಲೈನ್ ಫಿಕ್ಸ್ ಮಾಡಿದ್ದೇವೆ, ನೋಡೋಣ ಏನ್ ಆಗುತ್ತೆ ಅಂತ ಎಂದು ಪ್ರಶ್ನೆಗೆ ಉತ್ತರಿಸಿದರು.
ಇಂದು ಹಾಸನದಲ್ಲಿ ಸಂಸದರು ಮತ್ತು ಶಾಸಕರೊಂದಿಗೆ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಕುರಿತು ಸಭೆ ನಡೆಸಲಾಯಿತು. ವಿಶ್ವೇಶ್ವರಯ್ಯ ಜಲ ನಿಗಮ ವತಿಯಿಂದ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಕುಡಿಯುವ ನೀರಿನ ಯೋಜನೆ ವಿಳಂಬ ಆಗದಂತೆ ಕಾಮಗಾರಿ ಚುರುಕುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ಡಿಕೆಶಿ ವಿವರಿಸಿದರು.
ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ
ಇದಕ್ಕೂ ಮುನ್ನ ಹೆಬ್ಬನಹಳ್ಳಿ ಎಲೆಕ್ಟಿಕ್ ಸಬ್ ಸ್ಟೇಷನ್ನಲ್ಲಿ ಅಧಿಕಾರಿಗಳು, ಜನಪ್ರತಿನಿಧಿ ಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಯೋಜನೆ ಬಗ್ಗೆ ಮಾಹಿತಿ ನೀಡಿ ಪಶ್ಚಿಮಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
261 ಕಿ.ಮೀ ನಂತರ ಲಿಫ್ಟ್ ಮೂಲಕ 12.338 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹಾಗೂ 287 ಕೆರೆಗಳ ಭರ್ತಿಗೆ ನೀರು ಹರಿಸಲಾಗುವುದು. ಒಟು ಯೋಜನೆಯ ಪರಿಷ್ಕೃತ ಮೊತ್ತ 23,251.6 ಕೋಟಿರೂ. ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದರಾದ ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿಮೆಂಟ್ ಮಂಜು ಹಾಜರಿದರು.
ನಾಳೆ ಕಾವೇರಿ ಸರ್ವಪಕ್ಷ ಸಭೆ
ಕಾವೇರಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವರು, ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡುವವರನ್ನು ನಿಲ್ಲಿಸಲು ಆಗುತ್ತಾ, ಅವರ ಅಸ್ತಿತ್ವ ತೋರಿಸಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾನು ಈಗಾಗಲೇ ರೈತರಿಗೆ ಹೇಳಿದ್ದೇನೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಬಿಡಬೇಕು. ತಮಿಳುನಾಡಿಗೆ ಸಮಸ್ಯೆ ಇದೆ. ಅದಕ್ಕಾಗಿ ನೀರು ಬಿಟ್ಟಿದ್ದೇವೆ. ನಾಳೆ ಸರ್ವ ಪಕ್ಷ ಸಭೆ ಕರೆದಿದ್ದೇವೆ. ಎಲ್ಲರೂ ಸಹಕಾರ ಕೊಡ್ತಾರೆ ಅನ್ನೊಂಡಿದ್ದೀನಿ ಎಂದರು.
ಎಚ್ಡಿಕೆ ದೂರು ಕೊಡಲಿ
ಇದೇ ವೇಳೆ ನಮ್ಮ ಪಕ್ಷದ ಶಾಸಕರನ್ನು 3 ಬೆದರಿಸುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ನಾನು ಹಾಗೆ ಮಾಡಿದ್ದರೆ ಕಂಪ್ಲೇಂಟ್ ಕೊಡಬಹುದು ಎಂದು ಟಾಂಗ್ ನೀಡಿದರು.