ರಾಜ್ಯ

ಕರ್ನಾಟಕ ರಾಜ್ಯದ ಪಕ್ಷಾಂತರ ಪ್ರವೀಣ ಸಿಎಂ ಸಿದ್ದರಾಮಯ್ಯ : ಕೆ ಎಸ್​ ಈಶ್ವರಪ್ಪ

Defection of Karnataka state expert CM Siddaramaiah: KS Eshwarappa

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಪಕ್ಷಾಂತರ ಪ್ರವೀಣರಾಗಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪಕ್ಷಾಂತರ ಪ್ರವೀಣ ಯಾರು?, ಜೆಡಿಎಸ್ ನಿಂದ ಕಾಂಗ್ರೆಸ್​ಗೆ ಬಂದವರು ಯಾರು? ಇದೇ ಸಿದ್ದರಾಮಯ್ಯ ಅಲ್ವಾ, ಇವರಿಗೆ ಪಕ್ಷಾಂತರದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ 17 ಜನ ಶಾಸಕರು ಕಾಂಗ್ರೆಸ್​ನ ಆಡಳಿತ ಸರಿಯಿಲ್ಲ ಎಂದು ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಈ ವೇಳೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಪಕ್ಷಾಂತರವಾದ 17 ಜನ ಶಾಸಕರನ್ನ ಮರಳಿ ಪಕ್ಷಕ್ಕೆ ಸೇರಿಸಲ್ಲ ಎಂದು ಹೇಳಿದ್ದರು.

ಇದೀಗ ಕಾಂಗ್ರೆಸ್​​ನ ನಾಯಕರು ಮೂರ ಬಾರಿ ಶಾಸಕ ಎಸ್​.ಟಿ ಸೋಮಶೇಖರ್ ಅವರ ಮನೆಗೆ ಹೋಗಿದ್ದಾರೆ ಯಾಕೆ?. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ 23ಸ್ಥಾನ ಬರುತ್ತೆ ಅಂತ ಸಮೀಕ್ಷೆಗಳು ಹೇಳುತ್ತಿವೆ. ಇದಿರಂದ ಕಾಂಗ್ರೆಸ್​​ ಅವರು ನಿದ್ದೆ ಮಾಡುತ್ತಿಲ್ಲ.

23 ಸ್ಥಾನಗಳು ಬರ್ತಿದ್ದಂಗೆ ರಾಜ್ಯದಲ್ಲಿ ಈ ಸರ್ಕಾರ ಇರುತ್ತಾ? ನಾವು ಯಾರನ್ನು ಪಕ್ಷಕ್ಕೆ ಕರೆಯೋದೇ ಬೇಡ, ಕಾಂಗ್ರೆಸ್ಸಿನ ಶಾಸಕರೇ ದಿಕ್ಕಿಗೊಬ್ಬರು ಹೋಗ್ತಾರೆ, ಅವರು ಪಕ್ಷ ಉಳಿಯುವುದಿಲ್ಲ.ಇತ್ತೀಚೆಗೆ ಸಚಿವ ಮುನಿಯಪ್ಪ ಅವರು, ಎರಡೂವರೆ ವರ್ಷ ಆದಮೇಲೆ ಹಳೆಬರೆಲ್ಲ ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಹಾಗೆಯೇ ಕಾಂಗ್ರೆಸ್​ ಹಿರಿಯ ನಾಯಕ ಹಾಗು ಮಾಜಿ ಸಚಿವ ಬಸವರಾಜ್​ ರಾಯರೆಡ್ಡಿ ಅವರೂ, ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೇಳಿದ್ದರು.

ಕಾಂಗ್ರೆಸ್​​ ಸರ್ಕಾರಕ್ಕೆ ಈಗ ಮೂರು ತಿಂಗಳು ಆಗಿದೆ. ಲೋಕಸಭಾ ಚುನಾವಣೆಯಾಗಲಿ, ಆಗ ಇವರುಗಳ ಪರಿಸ್ಥಿತಿ ನೋಡಿ ಎಂದು ಈಶ್ವರಪ್ಪ ಹೇಳಿದರು.ಸರ್ಕಾರದ ವಿರುದ್ಧ ವಿಪಕ್ಷಗಳು ಕಾಂಟ್ರ್ಯಾಕ್ಟರ್​ ವಿಷಯವನ್ನ ಎತ್ತಿಕಟ್ಟಿದ್ದಾರೆಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಡಿಕೆ ಶಿವಕುಮಾರ್​ ಅವರು ಡಿಸಿಎಂ ಆದ ದಿನದಂದಲೂ ತಾವೇ ಸಿಎಂ ಅನ್ನೋ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಇಲಾಖೆಗಳ ತನಿಖೆ ಮಾಡಿಸುವ ಅಧಿಕಾರ ಅವರ ಕೈಯಲ್ಲಿದೆ. ಯಾವುದಾದರೊಂದು ಇಲಾಖೆಗೆ ಒಬ್ಬ ಜಡ್ಜ್ ಅವರನ್ನ ಚೇರಮನ್ ಮಾಡಿ, ಒಂದು ಪ್ರಕರಣವನ್ನ ಅವರಿಗೆ ನೀಡಿ, ಅದರ ಸಂಪೂರ್ಣ ವರದಿ ನೀಡಲು 15 ದಿನಗಳ ಕಾಲ ಅವರಿಗೆ ಸಮಯವಕಾಶ ಕೊಡಿ.

ಏಕೆಂದರೇ ಎಲ್ಲಾರದೂ ತನಿಖೆ ಮಾಡಿಸ್ತೀವಿ ಎಂದು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುತ್ತಿದ್ದರೆ ಬಿಜೆಪಿ ನಂಬೋಲ್ಲ ಎಂದರು.ಅವರಿಗೆ ನೇರವಾಗಿ ಸವಾಲು ಹಾಕುವೆ, ಯಾವುದಾದರೂ ಒಂದು ಇಲಾಖೆಯ ಕೇಸ್​ ಅನ್ನು ಹಾಲಿ ಅಥವಾ ನಿವೃತ್ತ ಜಡ್ಜ್ ಅವರ ನೇತೃತ್ವದಲ್ಲಿ ಸಮಿತಿ ಮಾಡಿ ತನಿಖೆ ಮಾಡಿಸಲಿ, ಆಗ ಸತ್ಯಾಂಶ ಗೊತ್ತಾಗುತ್ತೆ. ನಿಜಕ್ಕೂ ಕಳಕಳಿ ಇದ್ದರೆ ನಿಮ್ಮ ಕಾಲದಿಂದಲೂ ಈವರೆಗೆ ಆಗಿರುವ ಹಗರಣಗಳ ಬಗ್ಗೆ ತನಿಖೆ ಮಾಡಿಸಿ.

ಈ ಬ್ಲ್ಯಾಕ್ ಮೇಲ್ ತಂತ್ರನ ಜನ ನಂಬೋಲ್ಲ ಎಂದು ಡಿಸಿಎಂ ವಿರುದ್ಧ ಕಿಡಿಕಾರಿದರು.ಇನ್ನು ಕಪ್ಪು ಹಣ ತರುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಸುಬ್ರಹ್ಮಣ್ಯ ಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿ, ಚುನಾವಣೆ ಸಮಯದಲ್ಲಿ ಯಾರ ಬಾಯಿಯನ್ನ ತಡೆಹಿಡಿಯೋಕೆ ಆಗಲ್ಲ. ಆದರೇ ರಾಜ್ಯದ ಜನ ಬಹಳ ಬುದ್ಧಿವಂತರಿದಾರೆ. ಪ್ರಧಾನಿ ಮೋದಿ ಅವರು ಆಡಳಿತಕ್ಕೆ ಬಂದಮೇಲೆ, ದೇಶದ ಜನರಿಗೆ, ರೈತರಿಗೆ, ರಾಜ್ಯಕ್ಕೆ, ದೇಶಕ್ಕೆ ಏನು ಮಾಡಿದ್ದಾರೆ ಎಂದು ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ...

Back to top button
>