ಸಿನಿಮಾ ಸುದ್ದಿ

ರಾಜಕೀಯಕ್ಕೆ ಧುಮುಕಿದ ನಟ ದಳಪತಿ ವಿಜಯ್‌; ರಜನಿಕಾಂತ್‌ ರಿಯಾಕ್ಷನ್‌ ಏನು?

Dalpati Vijay, an actor who entered politics; What was Rajinikanth's reaction?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಚೆನ್ನೈ: ಸಿನಿರಂಗ ಮತ್ತು ರಾಜಕೀಯಕ್ಕೆ ಬಿಡಿಸಲಾರದ ನಂಟು. ಸಿನಿ ಕಲಾವಿದರು ರಾಜಕೀಯಕ್ಕೆ ಬರುವುದು ಸಾಮಾನ್ಯ ಎಂಬಂತಾಗಿದೆ. ಬಹಳ ಹಿಂದಿನಿಂದಲೂ ಇದು ರೂಢಿಯಲ್ಲಿದೆ. ಇದೀಗ ಹೊಸದಾಗಿ ಕಾಲಿವುಡ್‌ ನಟ, ದಳಪತಿ ವಿಜಯ್‌ (Vijay) ಸಕ್ರಿಯ ರಾಜಕೀಯಕ್ಕೆ ಧುಮಿಕಿದ್ದಾರೆ. ಫೆಬ್ರವರಿ 2ರಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಅದಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನಿಟ್ಟಿದ್ದಾರೆ. ಇದೀಗ ಈ ಕುರಿತು ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ಪ್ರತಿಕ್ರಿಯಿಸಿದ್ದಾರೆ.

ತಲೈವಾ ಹೇಳಿದ್ದೇನು?

ವಿಜಯ್‌ ಅವರು ರಾಜಕೀಯ ರಂಗಕ್ಕೆ ಪ್ರವೇಶಿಸಿರುವುದಕ್ಕೆ ರಜನಿಕಾಂತ್‌ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮಂಗಳವಾರ ರಜನಿಕಾಂತ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ಹಲವರು ವಿಜಯ್‌ ಅವರ ರಾಜಕೀಯ ಪ್ರವೇಶದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ರಜನಿಕಾಂತ್‌ ಅಭಿನಂದನೆ ತಿಳಿಸಿದರು. ವಿಜಯ್‌ ಅವರ ರಾಜಕೀಯ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.

ಕಣಕ್ಕಿಳಿಯಲಿದ್ದಾರಾ ವಿಜಯ್‌?

ಒಂದು ಮೂಲದ ಪ್ರಕಾರ ತಮಿಳುನಾಡಿನಲ್ಲಿ 2026ರ ರಾಜ್ಯ ಚುನಾವಣೆಯಲ್ಲಿ ವಿಜಯ್‌ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಇದುವರೆಗೆ 68 ಚಿತ್ರಗಳಲ್ಲಿ ನಟಿಸಿರುವ ವಿಜಯ್ ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಉಚಿತ ಆಹಾರ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು, ಸಂಜೆಯ ತರಗತಿಗಳು, ಕಾನೂನು ಸಹಾಯ ಸೇರಿದಂತೆ ಹಲವಾರು ಚಾರಿಟಿ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಪಬ್ಲಿಕ್ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ಷೇತ್ರವಾರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ “ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂತಹ ನಾಯಕರ ಬಗ್ಗೆ ಓದಿ, ಒಳ್ಳೆಯದನ್ನು ತೆಗೆದುಕೊಳ್ಳಿ ಮತ್ತು ಉಳಿದವನ್ನು ಬಿಡಿ” ಎಂದು ಸಲಹೆ ನೀಡಿದ್ದರು.

ಸದ್ಯ ವಿಜಯ್‌ ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (The Greatest of All Time) ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ವೆಟ್ರಿ ಮಾರನ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದು ವಿಜಯ್‌ ಅವರ ಕೊನೆಯ ಸಿನಿಮಾ ಆಗಲಿದೆ. ಬಳಿಕ ಅವರು ಸಕ್ರಿಯ ರಾಜಕಾರಣಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ...

Back to top button
>