ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಮಂಗಳೂರಿನ ಜೆರೋಸಾ ಹೈಸ್ಕೂಲ್ನಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮ, ಶ್ರೀ ರಾಮನಿಗೆ ಅವಮಾನ ಮಾಡಿದ ಪ್ರಕರಣ (Mangalore Issue) ಹಾಗೂ ಅದಕ್ಕೆ ಸಂಬಂಧಿಸಿ ಮಂಗಳೂರಿನ ಇಬ್ಬರು ಶಾಸಕರ ಮೇಲೆ ಎಫ್ಐಆರ್ (FIR on BJP MLAs) ದಾಖಲಿಸಿದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು. ಗುರುವಾರ ವಿಧಾನಸಭಾ ಅಧಿವೇಶನ (Budget Session) ಆರಂಭವಾಗುತ್ತಿದ್ದಂತೆಯೇ ಶಾಸಕ ಭರತ್ ಶೆಟ್ಟಿ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಒಂದಿಷ್ಟು ಜಟಾಪಟಿ ನಡೆದಿತ್ತು. ಅಂತಿಮವಾಗಿ ಸಂಜೆಯ ಹೊತ್ತಿಗೆ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಅವರು ಉತ್ತರ ನೀಡಿದರು. ಆಗಲೂ ಸಾಕಷ್ಟು ಬಿಸಿ ಬಿಸಿ ಚರ್ಚೆ ನಡೆಯಿತು.
ಮಂಗಳೂರಿನ ಶಿಕ್ಷಕಿ ಪ್ರಕರಣಕ್ಕೆ ಸಂಬಂಧಿಸಿ ಸಂಜೆ ಸದನದಲ್ಲಿ ಉತ್ತರ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಘಟನಾ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ, ಅವರ ಮೇಲೆ ಯಾಕೆ ಅವರ ಮೇಲೆ ಎಫ್ಐಆರ್ ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ಪಡೆಯಲಾಗುವುದು ಎಂದರು.
ಶಿಕ್ಷಕಿಯೊಬ್ಬರು ಶಾಲೆಯ ಮಕ್ಕಳ ಮುಂದೆ ಹಿಂದು ಧರ್ಮ, ರಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅವಹೇಳನಕಾರಿಯಾಗಿ ಮಾತನಾಡಿದರೂ ಯಾಕೆ ಎಫ್ ಐ ಆರ್ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪೋಲಿಸರು ತಮ್ಮ ಕರ್ತವ್ಯದಲ್ಲಿ ತಾರತಮ್ಯ ಮಾಡಿದ್ದಾರೆ. ಶಿಕ್ಷಕರ ಮೇಲೆ ದೂರು ಬಂದಾಗ ಎಫ್ ಐ ಆರ್ ಮಾಡಿಲ್ಲ. ತಪ್ಪನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಎಫ್ ಐ ಆರ್ ಮಾಡಲಾಗಿದೆ. ಪೋಷಕರು ಕೊಟ್ಟ ದೂರು ಆಧರಿಸಿ ಶಿಕ್ಷಕಿ ಮೇಲೆ ಎಫ್ಐಆರ್ ಆಗಬೇಕು. ಶಾಸಕರ ವಿರುದ್ಧ ಎಫ್ಐಆರ್ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಹಿಂದೂ ಸಮಾಜದ ಅವಹೇಳನ ಮಾಡಿದ ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಬರುತ್ತದೆ ಎಂದು ಹೇಳಿದರು.
ಮತಾಂತರಕ್ಕೆ ಪ್ರಚೋದನೆ ಮಾಡಿದ ಶಿಕ್ಷಕಿ ಮೇಲೆ ಎಫ್ಐ ಆರ್ ಮಾಡಬೇಕಿತ್ತು. ಆದರೆ, ಅದನ್ನು ಮಾಡದೆ ಶಾಸಕರ ಮೇಲೆ ಕ್ರಮ ಕೈಗೊಳ್ಳಲು ಹವಣಿಸಿದ್ದಾರೆ. ಇದರ ನಡುವೆ ಡಿಡಿಪಿಐಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.