ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕುರ್ಚಿಯ ಸ್ಥಾನವನ್ನು ಸರಿಪಡಿಸಿಕೊಂಡಿದ್ದಕ್ಕಾಗಿ ತಮ್ಮನ್ನು ‘ಟ್ರೋಲ್’ ಮಾಡಿದ ಘಟನೆಯನ್ನು ಶನಿವಾರ ನೆನಪಿಸಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸುವವರು ಸಹ ಒತ್ತಡವನ್ನು ನಿರ್ವಹಿಸುವ ಅಗತ್ಯವನ್ನು ಎತ್ತಿ ತೋರಿಸಿದರು.
ಇಂದು ಬೆಂಗಳೂರಿನ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ 21ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಜೆಐ, ನ್ಯಾಯಾಲಯಗಳಲ್ಲಿ ಕಕ್ಷಿದಾರರು ಮತ್ತು ವಕೀಲರು ಕೆಲ ಸಂದರ್ಭಗಳಲ್ಲಿ ಮಿತಿ ಮೀರಿ ವರ್ತನೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಅಸ್ತ್ರವನ್ನು ಬಳಕೆ ಮಾಡದೆ, ಅವರ ವರ್ತನೆಗೆ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದರು.
ಎರಡು ದಿನಗಳ ಈ ಸಮಾವೇಶದ ವಿಷಯಗಳಲ್ಲಿ ಒಂದಾದ ಕೆಲಸ-ಜೀವನ ಸಮತೋಲನ ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದ ಅವರು, ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯವು ನ್ಯಾಯಾಧೀಶರ ಜೀವನದಲ್ಲಿ ವಿಶೇಷವಾಗಿ ಜಿಲ್ಲಾ ನ್ಯಾಯಾಧೀಶರಿಗೆ ಹೆಚ್ಚು ಅಗತ್ಯವಾಗಿದೆ ಎಂದರು.