ಸಿನಿಮಾಸಿನಿಮಾ ಸುದ್ದಿ

ಮತ್ತೊಂದು ಸಿನಿಮಾದಿಂದ ಹೊರಬಂದ ರಮ್ಯಾ; ʼಉತ್ತರಕಾಂಡʼ ಚಿತ್ರದಿಂದ ಹಿಂದೆ ಸರಿದಿದ್ದೇಕೆ?

Ramya who came out of another movie; Why did you withdraw from the film 'Uttarakanda'?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ  ತಮ್ಮ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ನೀಡಿದ್ದಾರೆ. ಅವರನ್ನು ಮತ್ತೆ ಪರದೆ ಮೇಲೆ ನೋಡಬೇಕೆಂಬ ಆಸೆಗೆ ಸ್ವತಃ ನಟಿಯೇ ತಣ್ಣೀರೆರಚಿದ್ದಾರೆ. ಕಳೆದ ವರ್ಷ ʼಸ್ವಾತಿ ಮುತ್ತಿನ ಮಳೆ ಹನಿಯೇʼ  ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದಿದ್ದ ರಮ್ಯಾ ಇದೀಗ ʼಉತ್ತರಕಾಂಡʼ  ಸಿನಿಮಾದಿಂದಲೂ ಹೊರ ಬಂದಿದ್ದಾರೆ.

ಕಾರಣವೇನು?

ಈ ಬಗ್ಗೆ ಸ್ವತಃ ರಮ್ಯಾ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಈ ಸುದ್ದಿ ನೀಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ. ಹಾಗಾದರೆ ಅವರು ಮತ್ತೆ ರಾಜಕೀಯದತ್ತ ಮುಖ ಮಾಡುತ್ತಾರಾ? ಈ ಸಂದೇಹಕ್ಕೆ ಇಲ್ಲಿದೆ ಉತ್ತರ. ʼ‘ಡೇಟ್ಸ್​ ಕೊರತೆಯಿಂದಾಗಿ ನಾನು ʼಉತ್ತರಕಾಂಡʼದಲ್ಲಿ ಕೆಲಸ ಮಾಡುತ್ತಿಲ್ಲ (ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ). ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ʼ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಆ ಮೂಲಕ ಸಿನಿಮಾ ಮತ್ತು ರಾಜಕೀಯದಿಂದ ಬ್ರೇಕ್‌ ಪಡೆಯುವುದಾಗಿ ತಿಳಿಸಿದ್ದಾರೆ.

ಎರಡನೇ ಸಲ

2003ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ʼಅಭಿʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಮ್ಯಾ ಬಳಿಕ ಕನ್ನಡದ ಟಾಪ್‌ ನಟಿಯಾಗಿದ್ದರು. ಹಲವು ವರ್ಷಗಳ ಕಾಲ ನಂ. 1 ಸ್ಥಾನದಲ್ಲಿದ್ದರು. ಕನ್ನಡ ಜತೆಗೆ ತಮಿಳು, ತೆಲುಗಿನಲ್ಲಿಯೂ ಛಾಪು ಮೂಡಿಸಿದ್ದರು. 2016ರಲ್ಲಿ ಚಿತ್ರತಂಗದಿಂದ ಬಿಡುವು ಪಡೆದು ಸಕ್ರಿಯ ರಾಜಕಾರಣಿಯಾಗಿದ್ದರು.

ಕಾಂಗ್ರೆಸ್‌ಗೆ ಸೇರಿ ಸಂಸದೆಯೂ ಆದರು. ಬಳಿಕ ಕೆಲವು ವರ್ಷ ರಾಜಕೀಯದಿಂದಲೂ ಬ್ರೇಕ್‌ ಪಡೆದುಕೊಂಡಿದ್ದರು. 2023ರಲ್ಲಿ ಅವರು ಸ್ಯಾಂಡಲ್‌ವುಡ್‌ಗೆ ಮರಳುವ ಸೂಚನೆ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಮ್ಯಾ ಅವರು ರಾಜ್​ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಬೇಕಿತ್ತು. ಆ ಸಿನಿಮಾವನ್ನು ನಿರ್ಮಾಣ ಮಾಡುವುದರ ಜತೆಗೆ ನಾಯಕಿಯಾಗಿ ಅಭಿನಯಿಸಲು ಅವರು ಒಪ್ಪಿಕೊಂಡಿದ್ದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಥ್ರಿಲ್‌ ಆಗಿದ್ದರು.

ಆದರೆ ಅಭಿಮಾನಿಗಳ ಖುಷಿ ಹೆಚ್ಚು ದಿನ ಇರಲಿಲ್ಲ. ಅವರು ನಾಯಕಿ ಸ್ಥಾನದಿಂದ ಹಿಂದಕ್ಕೆ ಸರಿದು ಕೇವಲ ನಿರ್ಮಾಪಕಿಯಾಗಿ ಮುಂದುವರಿದಿದ್ದರು. ನಾಯಕಿಯಾಗಿ ಸಿರಿ ರವಿಕುಮಾರ್‌ ಅಭಿನಯಿಸಿದ್ದರು. ಕಳೆದ ವರ್ಷ ತೆರೆಕಂಡ ಈ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಅದಾದ ಬಳಿಕ ರಮ್ಯಾ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜತೆಗೆ ರೋಹಿತ್ ಪದಕಿ ನಿರ್ದೇಶನದ ʼಉತ್ತರಕಾಂಡʼ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವುದಾಗಿ ತಿಳಿಸಿದ್ದರು. ಮುಹೂರ್ತದಲ್ಲಿಯೂ ಪಾಲ್ಗೊಂಡಿದ್ದರು. ಕೆ.ಆರ್.ಜಿ ಸ್ಟುಡಿಯೋಸ್‌ ಸಂಸ್ಥೆಯ ಕಾರ್ತಿಕ್‌ ಮತ್ತು ಯೋಗಿ ಜಿ. ರಾಜ್ ನಿರ್ಮಾಣದ ʼಉತ್ತರಕಾಂಡʼ ಚಿತ್ರದಲ್ಲಿ ಡಾಲಿ ಧನಂಜಯ್‌ ನಟಿಸುತ್ತಿದ್ದು, ಮುಖ್ಯ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಡಾ.‌ ಶಿವರಾಜ್‌ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಬಹು ನಿರೀಕ್ಷಿತ ಸಿನಿಮಾದಿಂದ ರಮ್ಯಾ ಹೊರ ಬಂದಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ...

Back to top button
>