ರಾಜಕೀಯರಾಜ್ಯ

ಮೋದಿ ಭಾಷಣಕ್ಕೆ ಆಹಾರವಾಯ್ತು ಸಿದ್ದರಾಮಯ್ಯ ಕೋಪ

Siddaramaiah's anger fueled Modi's speech

ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನತೆ, ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮರಳಿ ಅಧಿಕಾರ ನೀಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಜನ ಬಿಜೆಪಿಯ ಅಭಿವೃದ್ಧಿ ಪರ ರಾಜಕಾರಣವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ವಿಜಯ ಸಂಕಲ್ಪ ಯಾತ್ರೆ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಿದ್ದು, ರಾಜ್ಯದ ಜನ ಈ ಯಾತ್ರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿಗೆ ಜನರ ಬೆಂಬಲ ಕಂಡು ಪ್ರತಿಪಕ್ಷ ಕಾಂಗ್ರೆಸ್‌ ಅಕ್ಷರಶಃ ನಲುಗಿ ಹೋಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದರು.

ಬಿಜೆಪಿಗೆ ಕಾರ್ಯಕರ್ತರೇ ಸರ್ವಸ್ವವಾಗಿದ್ದು, ಕಾರ್ಯಕರ್ತರಿಗೆ ಗೌರವ ನೀಡುವುದು ನಮ್ಮ ಸಂಪ್ರದಾಯ. ಆದರೆ ರಾಜ್ಯದ ರಾಜಕೀಯ ಪಕ್ಷದ ನಾಯಕರೊಬ್ಬರು, ನಿನ್ನೆ ತಮ್ಮದೇ ಪಕ್ಷದ ಕಾರ್ಯಕರ್ತನೋರ್ವನಿಗೆ ಕಪಾಳಮೋಕ್ಷ ಮಾಡಿದ ವಿಡಿಯೋವನ್ನು ನಾನು ನೋಡಿದೆ. ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಕಪಾಳಮೋಕ್ಷ ಮಾಡುವವರು, ಜನರನ್ನು ಗೌರವಿಸುವುದು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗನೋರ್ವನಿಗೆ ಕಪಾಳಮೋಕ್ಷ ಮಾಡಿದ ಘಟನೆಯನ್ನು ಪ್ರಸ್ತಾಪಿಸಿದರು.

ಕರ್ನಾಟಕದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ನನ್ನ ಸಹೋದರನಿದ್ದಂತೆ. ನಾನು ಕರ್ನಾಟಕದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನನ್ನು ಗೌರವಿಸುತ್ತೇನೆ. ಅವರಿಲ್ಲದೇ ಪಕ್ಷವಿಲ್ಲ ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದರು.

ಸಿದ್ದರಾಮಯ್ಯ ತಮ್ಮ ಬೆಂಬಲಿಗನೋರ್ವನಿಗೆ ಕಪಾಳ ಮೋಕ್ಷ ಮಾಡಿದ ಸುದ್ದಿಯನ್ನು ಪ್ರಕಟಿಸಿದ್ದ ನಿಮ್ಮ ನೆಚ್ಚಿನ ‘ಹೆಚ್‌ಟಿ ಕನ್ನಡ’, ಇದು ಚುನಾವಣೆ ಸಮಯದಲ್ಲಿ ಬಿಜೆಪಿಗೆ ಆಹಾರವಾಗಲಿದೆ ಎಂದು ಅಂದಾಜಿಸಿತ್ತು.

ಅದರಂತೆಯೇ ಪ್ರಧಾನಿ ಮೋದಿ, ಸಿದ್ದರಾಮಯ್ಯ ಅವರ ಕೋಪದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದು, ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾರದವರು, ರಾಜ್ಯದ ಜನರನ್ನು ಹೇಗೆ ಗೌರವಿಸುತ್ತಾರೆ ಎಂದು ಪ್ರಶ್ನಿಸಿರುವುದು ರಾಜ್ಯದ ಗಮನ ಸೆಳೆದಿದೆ.

ಕರ್ನಾಟಕದ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದು. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಅತ್ಯಂತ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಗುರಿಯೊಂದಿಗೆ ನಾವು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಬಹುಪಾಲು ಕರ್ನಾಟಕಕ್ಕೆ ದಕ್ಕುತ್ತಿದ್ದು, ಕರ್ನಾಟಕ ಅಭಿವೃದ್ಧಿಯ ನಾಗಾಲೋಟದಲ್ಲಿ ಮುಂಚೂಣಿಯಲ್ಲಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ನಮ್ಮ ಸರ್ಕಾರ ದಲಿತರು, ಬಡವರು, ಮಹಿಳೆಯರು ಮತ್ತು ದೀನದಲಿತರ ಸಬಲೀಕರಣದ ಪಣ ತೊಟ್ಟಿದೆ. ನಮ್ಮದು ಬಡವರ ಪರ ಸರ್ಕಾರವಾಗಿದ್ದು, ಬಡವರ ಏಳಿಗೆಯೇ ನಮ್ಮ ಗುರಿ ಎಂದು ಪ್ರಧಾನಿ ಮೋದಿ ನುಡಿದರು.

ಕರ್ನಾಟಕವು ಈ ಹಿಂದೆ ಸ್ವಾರ್ಥ ಮತ್ತು ಅವಕಾಶವಾದಿ ಮೈತ್ರಿಕೂಟಗಳ ಸರ್ಕಾರವನ್ನು ನೋಡಿದೆ. ಇಂತಹ ಸರ್ಕಾರಗಳು ಯಾವಾಗಲೂ ರಾಜ್ಯಕ್ಕೆ ಹಾನಿ ಮಾಡುತ್ತಲೇ ಬಂದಿವೆ. ಆದ್ದರಿಂದ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡುವ ಮೂಲಕ, ಅಭಿವೃದ್ಧಿ ಪರ ಆಡಳಿತಕ್ಕೆ ಮುನ್ನುಡಿ ಬರೆಯಬೇಕು ಎಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಕ್ಷೇತ್ರ ಹುಡುಕಾಟದಲ್ಲಿರುವ ಪ್ರತಿಪಕ್ಷ ನಾಯಕರು ಚುನಾವಣೆಗೂ ಮೊದಲೇ ತಮ್ಮ ಸೋಲೊಪ್ಪಿಕೊಂಡಿದ್ದರೆ ಎಂದು ವ್ಯಗ್ಯವಾಡಿದರು.

ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ರಾಜ್ಯದಲ್ಲಿ ಬಿಜೆಪಿಯನ್ನು ಧಿಕಾರಕ್ಕೆ ತಂದು, ಆ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡುವುದೇ ತಮ್ಮ ಗುರಿ ಎಂದು ಬಿಎಸ್‌ವೈ ಇದೇ ವೇಳೆ ಘೋಷಿಸಿದರು.

ಇದನ್ನೂ ಓದಿ...

Back to top button
>