ವರದಿ: ಪ್ರಿಯಲಚ್ಛಿ
ಮೈಸೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದು, ಇದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಅಸಮಾಧಾನಕ್ಕೆ ಒಳಗಾದ ಸಂಘಟನೆಗಳು ಪ್ರಣಾಳಿಕೆಗಳನ್ನು ಸುಡುವ ಮೂಲಕ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸಿವೆ.
ಈ ಎಲ್ಲಾ ಸದ್ದು ಗದ್ದಲಗಳ ನಡುವೆ ಕಾಂಗ್ರೆಸ್ನ ಹಿರಿಯ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಂಜನೇಯನ ಮಂದಿರಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರೆ ರಾಜ್ಯದಲ್ಲಿ ಈಗಿರುವ ಹನುಮಾನ್ ದೇವಾಲಯಗಳನ್ನೂ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ʼನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಾದ್ಯಂತ ಇರುವ ಹನುಮಾನ್ ದೇಗುಲಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ನಮ್ಮ ಸರ್ಕಾರ ರಾಜ್ಯದಾದ್ಯಂತ ಹೊಸ ಹನುಮಾನ್ ದೇವಾಲಯಗಳನ್ನು ನಿರ್ಮಿಸುತ್ತದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೇ 13 ರಂದು ನಾವು ಕನಿಷ್ಠ 140 ರಿಂದ 150 ಸ್ಥಾನಗಳನ್ನು ಪಡೆಯುತ್ತೇವೆʼ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐನಂತರ ಸಂಘಟನೆಗಳನ್ನು ನಿಷೇಧಿಸುವುದಾಗಿ ಉಲ್ಲೇಖಿಸಿದೆ. ಕಾಂಗ್ರೆಸ್ನ ಈ ಪ್ರಣಾಳಿಕೆಗೆ ಸಂಬಂಧಿಸಿ ಬಿಜೆಪಿ ಕೈ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿತ್ತು.
ಪ್ರಧಾನಿ ಮೋದಿ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾದ ಬಳಿಕ ಕರ್ನಾಟಕದಲ್ಲಿ ನಡೆದ ಚುನಾವಣಾ ಭಾಷಣದ ವೇಳೆಯೂ ಮೋದಿ ʼಜೈ ಬಜರಂಗಬಲಿʼ ಘೋಷಣೆಯ ಮೂಲಕ ಭಾಷಣವನ್ನು ಮುಗಿಸುತ್ತಿದ್ದರು.
ಈ ಮಧ್ಯೆ, ಬಜರಂಗ ದಳ ಮತ್ತು ಇತರ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ ಮತ್ತು ಹಿಂದೂ ಸಮುದಾಯದ ಕ್ಷಮೆಯಾಚಿಸಲು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತಿವೆ. ಪ್ರತಿಭಟನೆಯ ಸಂಕೇತವಾಗಿ ಗುರುವಾರ ಬೆಂಗಳೂರಿನ ಮಲ್ಲೇಶ್ವರಂನ ದೇವಸ್ಥಾನದಲ್ಲಿ ಬಿಜೆಪಿ ಸದಸ್ಯರೊಂದಿಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಘೋಷಿಸಿದರು.