ಇತ್ತೀಚೆಗಷ್ಟೇ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದ ಭಾರತದ ಆಟಗಾರ್ತಿಗೆ ಸನ್ಮಾನಿಸಲು ತೆರಳುವಾಗ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡ (Former Haryana CM Bhupinder Singh Hooda) ಅವರ ಕಾರು ಭೀಕರ ಅಪಘಾತಕ್ಕೆ ಒಳಪಟ್ಟಿತ್ತು. ಆದರೆ ಅಪಘಾತದ ಬಳಿಕವೂ ಕ್ರೀಡಾಪಟು ಊರಿಗೆ ತೆರಳಿ ಸನ್ಮಾನಿಸಿದ ಮಾಜಿ ಮುಖ್ಯಮಂತ್ರಿ ಅವರ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ
.
ಭಾರತದ ಬಾಕ್ಸರ್ ಸ್ವೀಟಿ ಬೋರಾ (boxer Saweety Boora) ಅವರು ಮಾರ್ಚ್ 25 ರಂದು 81 ಕೆಜಿ ವಿಭಾಗದಲ್ಲಿ ಚೀನಾದ ವ್ಯಾಂಗ್ ಲಿನಾ ಎದುರು ಸ್ವರ್ಣ ಗೆದ್ದಿದ್ದರು. ಆ ಮೂಲಕ ಭಾರತ ಕೀರ್ತಿ ಪತಾಕೆ ಹಾರಿಸಿದ್ದರು. ಹರ್ಯಾಣದ ಬಾಕ್ಸರ್ ಸ್ವೀಟಿ ಬೋರಾ ಅವರಿಗೆ ಹರ್ಯಾಣ ಸರ್ಕಾರ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳು ಸನ್ಮಾನ ಮಾಡಿದ್ದವು.
ಅದರಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಅವರು ಸಹ ಸ್ವರ್ಣ ಗೆದ್ದ ಪ್ರತಿಭೆಯನ್ನು ಸನ್ಮಾನಿಸಲು ಇಚ್ಛಿಸಿದ್ದರು. ಅದಕ್ಕಾಗಿ ಇಂದು (ಏಪ್ರಿಲ್ 9ರಂದು) ಭೂಪೇಂದ್ರ ಸಿಂಗ್ ಅವರು, ಹಿಸ್ಸಾರ್ ಜಿಲ್ಲೆಯ ಗ್ರಿರಯೆ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಹೂಡ ಅವರ ಕಾರು ಅಪಘಾತಕ್ಕೆ ಒಳಪಟ್ಟಿತು.
ಮಾಜಿ ಸಿಎಂ ಅವರ ಕಾರು ವೇಗವಾಗಿ ಸಂಚರಿಸುತ್ತಿತ್ತು. ಈ ವೇಳೆ ನೀಲ್ಗಾಯ್ ಕಾಡು ಪ್ರಾಣಿ, ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಪುಡಿಯಾಗಿದೆ. ಕಾರಿನ ಚಾಲಕ ತಕ್ಷಣವೇ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಕಾರಣ ಹೆಚ್ಚಿನ ಸಮಸ್ಯೆಯಾಗಿಲ್ಲ. ಅಪಘಾತದ ಬಳಿಕ ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.
ಸದ್ಯ ಅಪಘಾತದ ಬಳಿಕ ಹೂಡ ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿರು. ಕಾರಿನಲ್ಲಿದ್ದವರು ಸುರಕ್ಷಿತವಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತದ ನಂತರವೂ ಮತ್ತೊಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ ಭೂಪೇಂದ್ರ ಅವರು ಗಿರಯೆ ಗ್ರಾಮಕ್ಕೆ ತೆರಳಿ ಬಾಕ್ಸರ್ ಸ್ವೀಟಿ ಬೋರಾ ಅವರನ್ನು ಸನ್ಮಾನಿಸಿದ್ದಾರೆ. ಇದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಭೂಪೇಂದ್ರ ಸಿಂಗ್, ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ನಿಲ್ಗಾಯ್ ಪ್ರಾಣಿಯು ಅಚಾನಕ್ಕಾಗಿ ಒಂದು ಬದಿಯಿಂದ ಮತ್ತೊಂದು ಕಡೆಗೆ ಜಿಗಿದ ಕಾರಣ ಈ ಅವಘಡ ಸಂಭವಿಸಿತು ಎಂದವರು ತಿಳಿಸಿದರು. ಕಾರಿನ ಏರ್ಬ್ಯಾಗ್ ತೆರೆದುಕೊಂಡಿತು. ಇದು ಆತಂಕಕ್ಕೆ ಕಾರಣ ಆಗಿತ್ತು. ಆದರೆ ಡ್ರೈವರ್ ತಕ್ಷಣವೇ ಕಾರು ನಿಲ್ಲಿಸಿಬಿಟ್ಟರು. ಎಲ್ಲರೂ ಪ್ರಾಣಾಪಾಯದಿಂದ ಪಾರಾದೆವು ಎಂದು ಮಾಜಿ ಮುಖ್ಯಮಂತ್ರಿ ಘಟನೆ ಕುರಿತು ವಿವರಿಸಿದ್ದಾರೆ.
ಕಳೆದ ತಿಂಗಳು ನಡೆದ ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ 4 ಚಿನ್ನದ ಪದಕ ಗೆದ್ದುಕೊಂಡಿತ್ತು. ಅದರಲ್ಲಿ ಹರ್ಯಾಣ ಬಾಕ್ಸರ್ ಸ್ವೀಟಿ ಬೋರಾ ಅವರು ಕೂಡ ಒಬ್ಬರು. ನೀತು ಗಂಗಾಸ್, ನಿಖಾತ್ ಜರೀನ್ ಹಾಗೂ ಲವ್ಲೀನಾ ಬೋರ್ಗೋಹೈನ್ ಅವರು ಸಹ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.