ರಾಜ್ಯ

ಮೋದಿ ಜನಪ್ರಿಯತೆ ಮಂಕಾಗಿದೆ, ಕರ್ನಾಟಕದಲ್ಲಿ ಮೋದಿ ವರ್ಚಸ್ಸು ನಂಬಿದ್ದ ಬಿಜೆಪಿ ಧೂಳಿಪಟ ಆಯ್ತು: ಸಿಎಂ ಸಿದ್ದರಾಮಯ್ಯ

Modi's popularity has waned, BJP, which believed in Modi's charisma, has become dust in Karnataka: CM Siddaramaiah

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಚಿಕ್ಕೋಡಿ: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಐದು ಭರವಸೆಗಳನ್ನು ನೀಡಿದ್ದೇವೆ. ಅದರಲ್ಲಿ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡಲು ನಾವು ಘೋಷಣೆ ಮಾಡಿದ್ದೀವಿ. ಆದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕೇಳಿದರೆ ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಸರ್ಕಾರದಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕರ್ನಾಟದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿಕಾರಿ ಬದಲಾವಣೆ ಮಾಡಿದರು. ಇಲ್ಲಿ ಕೂಡ ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜರ, ಅಂಬೇಡ್ಕರ್, ಹಲವು ಬದಲಾವಣೆ ತಂದು ಸಾಮಾಜಿಕ ಕ್ರಾಂತಿ ಮಾಡಿದರು.

ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ನಾನು ಇಲ್ಲಿ ಬರುತ್ತಿರಲಿಲ್ಲ, ನಾನು ಸಿಎಂ ಆಗುತ್ತಿರಲಿಲ್ಲ, ಅಂಬೇಡ್ಕರ್ ಸಂವಿಧಾನ ಕೊಡುಗೆಯಿಂದ ಬಡವರು ದೀನ ದಲಿತರು ಆರ್ಥಿಕವಾಗಿ ಬೆಳೆಯಲು ಕಾರಣವಾಗಿದೆ. ಸಮಾನತೆ ತತ್ವದಡಿ ಸಮಾಜ ಬೆಳೆಯುವುದಕ್ಕೆ ಸಂವಿಧಾನ ಕಾರಣವಾಗಿದೆ. ನಮ್ಮ ಸಂವಿಧಾನ ಸಮಾನತೆಯನ್ನು ನೋಡಿಕೊಳ್ಳುತ್ತದೆ ಎಂಬ ಕಾರಣಕ್ಕೆ ಬಿಜೆಪಿಯವರು ಸಂವಿಧಾನ ವಿರೋಧ ಮಾಡುತ್ತಾ ಬಂದಿದೆ. ಸಾವರ್ಕರ್ ಸಂವಿಧಾನ ವಿರೋಧ ಮಾಡಿದರು. ಈಗಲೂ ಬಿಜೆಪಿಯವರು ಸಂವಿಧಾನ ವಿರೋಧ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್ ನವರು ಸಂವಿಧಾನ ಉಳಿವಿಗಾಗಿ ಶಪಥ ಮಾಡಬೇಕು, ಸಂವಿಧಾನ ಉಳಿದರೆ ನಾವು ಉಳಿಯುವುದಕ್ಕೆ ಸಾಧ್ಯ. ಸಂವಿಧಾನ ಒಂದು ವೇಳೆ ಬದಲಾವಣೆ ಆದರೆ ನಾವು ಯಾರೂ ಉಳಿಯುವುದಿಲ್ಲ. ನಮ್ಮ ಸಂವಿಧಾನ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆ ಆಗಬೇಕು. ಬಿಜೆಪಿಯವರು ಧರ್ಮ ಧರ್ಮದ ನಡುವೆ ಕೋಮುವಾದ ಜಗಳ ಹಚ್ಚಿದ್ದಾರೆ, ಇದರಿಂದ ಜಾಗೃತಿ ವಹಿಸಬೇಕಾಗಿದೆ. ಸಂಘ ಪರಿವಾರದವರು ಜನರ ನಡುವೆ ಧರ್ಮ ಧರ್ಮದ ನಡುವೆ ಅಶಾಂತಿ ಮೂಡಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ದೇಶದಲ್ಲಿ ಹಲವು ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರನ್ನು ಕಿತ್ತೊಗೆಯಬೇಕು. ಕರ್ನಾಟಕದಲ್ಲಿ ಚುನಾವಣೆ ನಡೆದಾಗ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಬಿಜೆಪಿ ಕಿತ್ತು ಹಾಕಿದರು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​​ನ 135 ಶಾಸಕರನ್ನು ಜನರು ಗೆಲ್ಲಿಸಿದ್ದಾರೆ. ಕರ್ನಾಟದಲ್ಲಿ ಯಾವತ್ತೂ ಬಿಜೆಪಿ ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಷನ್ ಕಮಲ ಮಾಡುವ ಮೂಲಕ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋಟ್ಯಂತರ ರೂಪಾಯಿ ಶಾಸಕರಿಗೆ ನೀಡಿ ಖರೀದಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಅಂದ್ರೆ ಭ್ರಷ್ಟಾಚಾರ, ಕರ್ನಾಟಕದಲ್ಲಿ ಗುತ್ತಿಗೆದಾರ ಸಂಘ 40% ಸರ್ಕಾರ ಎಂದು ಕರೆದಾಗ, ವಿರೋಧ ಪಕ್ಷದ ನಾಯಕನಾಗಿದ್ದೆನು. ಆದರೆ ನಾನು ಆ ರೀತಿ ಕರೆಯಲಿಲ್ಲ, ಅದನ್ನು ಗುತ್ತಿಗೆದಾರ ಸಂಘ ಆ ರೀತಿ ಹೇಳಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ಫಡ್ನವಿಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ನಾನು ಕೇಳಿದ್ದೇನೆ. ಈ ಭ್ರಷ್ಟ ಸರ್ಕಾರ ತೆಗೆದು ಹಾಕುವ ಸಮಯ ಬಂದಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಗ್ಯಾರಂಟಿ ಯೋಜನೆಯಡಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ, ಇದರಿಂದ ಮಹಿಳೆಯರು ಉಚಿತ ಬಸ್​ ಪ್ರಯಾಣ ಮಾಡುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ ಹಾಗೂ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತೇವೆ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುತ್ತೇವೆ. ಈ ಯೋಜನೆ ಜಾರಿಗೆ ಕೇಂದ್ರ ಬಿಜೆಪಿ ನಾಯಕರು ತಡೆ ಒಡ್ಡುತ್ತಿದ್ದಾರೆ. ಬಿಜೆಪಿ ಪಕ್ಷದವರು ಎಂಥ ನೀಚರು ಗೊತ್ತಾ? ಫುಡ್ ಕಾರ್ಪೊರೇಷನ್ ಆಫ್​ ಇಂಡಿಯಾ ನಮಗೆ ಅಕ್ಕಿ ಕೊಡುವುದಕ್ಕೆ ಒಪ್ಪಿಗೆ ನೀಡಿದರೂ, ಬಿಜೆಪಿ ಸರ್ಕಾರ ಇದಕ್ಕೆ ತಡೆ ನೀಡಿ, ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಂಕಾಗಿದೆ, ಕರ್ನಾಟದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಮೋದಿ ವರ್ಚಸ್ಸು ನಂಬಿತು. ಆದರೆ ಅವರ ನಂಬಿಕೆ ಸುಳ್ಳಾಯಿತು. ನರೇಂದ್ರ ಮೋದಿ ದೇಶ ಕಂಡ ಅತಿ ಸುಳ್ಳುಗಾರ, ನಾನು ಯಾವತ್ತೂ ಇಂತಹ ಸುಳ್ಳುಗಾರರನ್ನು ನೋಡಿಲ್ಲ, ಚುನಾವಣೆ ಸಂದರ್ಭದಲ್ಲಿ ಹೇಳಿದರು ವಿದೇಶದಲ್ಲಿ ಕಪ್ಪು ಹಣ ಇದೆ. ಪ್ರತಿ ಒಬ್ಬರಿಗೆ 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ರು, ಕೊಟ್ಟಾರಾ‌..? ಎಂದು ಪ್ರಶ್ನಿಸಿದರು. ಜತ್ ತಾಲೂಕಿಗೆ ನೀರು ಒದಗಿಸಬೇಕು, ಬಿತ್ತಿಪತ್ರ ನಾನು ನೋಡುತ್ತಿದ್ದೇನೆ, ಈ ಸರ್ಕಾರ ಜತೆಗೆ ನಾವು ಒಡಂಬಡಿಕೆ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.

ಇದೇ ವೇಳೆ ಸಚಿವ ಎಂ ಬಿ ಪಾಟೀಲ್ ಮಾತನಾಡಿ, ತುಬಜಿ ಬಬಲೇಶ್ವರ ಏತ ನೀರಾವರಿಯಿಂದ ಮಹಾರಾಷ್ಟ್ರದ ಭಾಗದ ರೈತರಿಗೆ ನೀರನ್ನು ಕೊಡುತ್ತೇವೆ. ಕೃಷ್ಣಾ ನದಿಗೆ ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ನೀರು ಹರಿಸಿದರೆ, ನಾವು ಮಳೆಗಾಲದಲ್ಲಿ ಮಹಾರಾಷ್ಟ್ರ ಭಾಗಕ್ಕೆ ನೀರು ಹರಿಸುತ್ತೇವೆ ಎಂದು ಹೇಳಿದರು.

ಗಡಿನಾಡು ಕನ್ನಡಿಗರಿಗೆ ಸರ್ಕಾರಿ ಉದ್ಯೋಗದಲ್ಲಿ & ಶಿಕ್ಷಣದಲ್ಲಿ 10% ಮೀಸಲಾತಿ ನೀಡಬೇಕೆಂದು ಕನ್ನಡ ಭಾಷೆಯಲ್ಲಿ ಮಹಾರಾಷ್ಟ್ರದಲ್ಲಿ ನೆಲಸಿರುವ ಕನ್ನಡಿಗರು ಭಿತ್ತಿಚಿತ್ರ ಪ್ರದರ್ಶನ ಮಾಡಿದರು. ಸಿದ್ದರಾಮಯ್ಯನವರ ಗಮನ ಸೆಳೆಯಲು ಕನ್ನಡದಲ್ಲಿಯೇ ಬ್ಯಾನರ್ ಪ್ರದರ್ಶನ ಮಾಡಿದರು.

ಇದನ್ನೂ ಓದಿ...

Back to top button
>